ADVERTISEMENT

75 ಲಕ್ಷ ಹೆಚ್ಚುವರಿ ಉದ್ಯೋಗ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST
ನವ ಕರ್ನಾಟಕ ವಿಷನ್‌ 2025 ವಿಷಯದ ಮೇಲೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸೆಲ್ಫಿ ತೆಗೆದುಕೊಂಡರು. -ಪ್ರಜಾವಾಣಿ ಚಿತ್ರ
ನವ ಕರ್ನಾಟಕ ವಿಷನ್‌ 2025 ವಿಷಯದ ಮೇಲೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸೆಲ್ಫಿ ತೆಗೆದುಕೊಂಡರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: 2025ಕ್ಕೆ ರಾಜ್ಯವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘ನವ ಕರ್ನಾಟಕ ವಿಷನ್‌–2025’ ಮುನ್ನೋಟ ದಾಖಲೆ ಬಿಡುಗಡೆ ಮಾಡಿದರು.

ಸುಮಾರು 93 ಪುಟಗಳ ಮುನ್ನೋಟ ದಾಖಲೆಯಲ್ಲಿ ಕರ್ನಾಟಕ ಅಭಿವೃದ್ಧಿ ಮಾದರಿಯಲ್ಲಿ 8 ತತ್ವಗಳಿವೆ. ಎಲ್ಲರನ್ನು ಒಳಗೊಳ್ಳುವ ಬೆಳವಣಿಗೆಗಾಗಿ 10 ರಾಜಿಯಾಗದ ಆದ್ಯತೆಗಳು ಮತ್ತು ಸಾಮಾಜಿಕ– ಆರ್ಥಿಕ ಅಭಿವೃದ್ಧಿಗಾಗಿ 13 ಬೆಳವಣಿಗೆ ವಲಯಗಳನ್ನು ಗುರುತಿಸಲಾಗಿದೆ.

ರಾಜ್ಯದ ದೇಶೀಯ ಉತ್ಪನ್ನವನ್ನು (ಜಿಎಸ್‌ಡಿಪಿ) ₹ 24.3 ಲಕ್ಷ ಕೋಟಿಗೆ ಹೆಚ್ಚಿಸುವುದು. ಈ ಮೂಲಕ ಬೆಳವಣಿಗೆ ದರವನ್ನು ಶೇ 8.5 ಕ್ಕೆ ಏರಿಸುವುದು. ತಲಾ ಆದಾಯದ ವರಮಾನ ₹ 2.73 ಲಕ್ಷಕ್ಕೆ ಹೆಚ್ಚಿಸುವುದು ಮತ್ತು 75 ಲಕ್ಷ ಹೆಚ್ಚುವರಿ ಉದ್ಯೋಗಗಳ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಸಿದ್ದರಾಮಯ್ಯ ತಮ್ಮ ಕನಸಗಳನ್ನು ಹಂಚಿಕೊಂಡರು.

ADVERTISEMENT

ನಗರದಲ್ಲಿ ಶನಿವಾರ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಗೊಮ್ಮೆ ಈಗೊಮ್ಮೆ ರಾಜಕೀಯದ ವಿಷಯ ಪ್ರಸ್ತಾಪಿಸಿದರೂ, ಈ ವರೆಗೆ ಮಾಡಿರುವ ಮತ್ತು 2025 ರವರೆಗೆ ತಾವು ಮಾಡಲು ಬಯಸಿರುವ ಕಾರ್ಯಕ್ರಮಗಳ ಮೇಲೆ ತಮ್ಮ ಮಾತುಗಳನ್ನು ಕೇಂದ್ರೀಕರಿಸಿದ್ದರು.

ಇದಲ್ಲದೆ, ರಾಜ್ಯದ ಉದ್ದಗಲಕ್ಕೂ ಸರ್ವ ಋತುಗಳ ರಸ್ತೆಗಳ ಸಂಪರ್ಕ ಜಾಲ, ಎಲ್ಲರಿಗೂ ಕೈಗೆಟಕುವ ಬೆಲೆಗಳಲ್ಲಿ ವಸತಿ, ಸರ್ಕಾರದ ಎಲ್ಲ ಸೇವೆಗಳನ್ನು ಡಿಜಿಟಲೀಕರಿಸಿ ಶೇ 100 ರಷ್ಟು ಡಿಜಿಟಲ್‌ ಒಳಗೊಳ್ಳುವಿಕೆ ಸಾಧಿಸುವುದು. ಬೆಂಗಳೂರು, ಬೆಳಗಾವಿ, ಕಲಬುರ್ಗಿ ಮತ್ತು ಮೈಸೂರು ಪ್ರದೇಶಗಳಲ್ಲಿ ಅವಕಾಶಗಳು ಮತ್ತು ಯಶಸ್ಸುಗಳಿಗೆ ಗಮನಹರಿಸಿ ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಒಂದು ತಿಂಗಳಲ್ಲಿ ದಾಖಲೆ ತಯಾರಿ
ಈ ಮುನ್ನೋಟ ದಾಖಲೆಯನ್ನು ಕೇವಲ ಒಂದು ತಿಂಗಳಲ್ಲಿ ತಯಾರಿಸಲಾಗಿದೆ. ಈ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಚಿದಂಬರಂ 30 ಜಿಲ್ಲೆಗಳಿಗೆ ಭೇಟಿ ನೀಡಿ ಸಮಾಜದ ವಿವಿಧ ವರ್ಗದ ಜನತೆ, ಸಂಘ–ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಿ, ಮಾಹಿತಿ ಸಂಗ್ರಹಿಸಿ ದಾಖಲೆಗೆ ಅಂತಿಮರೂಪ ನೀಡಿದ್ದಾರೆ.

*
ನವ ಕರ್ನಾಟಕದ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದೇವೆ. ಮುನ್ನೋಟ ದಾಖಲೆಯಲ್ಲಿರುವ ಅಂಶಗಳನ್ನು ಕಾರ್ಯಗತಗೊಳಿಸುತ್ತೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

*
ಮುಂದಿನ ದಶಕದಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ನಡೆಸುವ ಅಪೂರ್ವ ದಾಖಲೆ ಇದು.
– ಜೈರಾಮ್‌ ರಮೇಶ್‌,
ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.