ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್ ಪ್ರಕ್ರಿಯೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಹಣಕಾಸು ಸಚಿವಾಲಯವು ಟ್ವೀಟ್ ಸರಣಿ ಆರಂಭಿಸಿದೆ.
ಬಜೆಟ್ನಲ್ಲಿ ಬಳಕೆಯಾಗುವ ವಿವಿಧ ಪದಗಳ ಬಗ್ಗೆ ಅರ್ಥ ವಿವರಣೆ ನೀಡುವುದು ಈ ಟ್ವೀಟ್ ಸರಣಿಯ ಉದ್ದೇಶವಾಗಿದೆ.
‘ತಿಳಿಯಿರಿ ನಿಮ್ಮ ಬಜೆಟ್’ (ಕೆವೈಬಿ) ಟ್ವೀಟ್ ಸರಣಿಯು, ಕೇಂದ್ರ ಸರ್ಕಾರದ ಬಜೆಟ್ನ ಮಹತ್ವ ಮತ್ತು ಅದನ್ನು ಸಿದ್ಧಪಡಿಸುವ ವಿಧಾನದ ಬಗ್ಗೆ ಹದಿನೈದು ದಿನಗಳ ಕಾಲ ಮುಂದುವರೆಯಲಿದೆ.
ಲೋಕಸಭೆಗೆ ಚುನಾವಣೆ ನಡೆಯಲಿರುವುದರಿಂದ ಫೆಬ್ರುವರಿ 1ರಂದು ಕೇಂದ್ರ ಸರ್ಕಾರ 2019–20ನೇ ಹಣಕಾಸು ವರ್ಷಕ್ಕೆ ಮಧ್ಯಂತರ ಬಜೆಟ್ ಮಂಡಿಸಲಿದೆ. ಹೊಸದಾಗಿ ಅಧಿಕಾರಕ್ಕೆ ಬರುವ ಸರ್ಕಾರವು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ.
ಕೇಂದ್ರ ಬಜೆಟ್, ಲೇಖಾನುದಾನದ ಕುರಿತು ಮಂಗಳವಾರದ ಟ್ವೀಟ್ನಲ್ಲಿ ವಿವರಿಸಲಾಗಿದೆ. ಬಜೆಟ್ ಎನ್ನುವುದು ಸರ್ಕಾರದ
ಹಣಕಾಸು ಸ್ಥಿತಿಗತಿಯ ಸಮಗ್ರ ವರದಿಯಾಗಿದೆ. ಎಲ್ಲ ಮೂಲಗಳಿಂದ ಬರುವ ವರಮಾನ ಮತ್ತು ಎಲ್ಲ ಬಗೆಯ ಅಭಿವೃದ್ಧಿ ಚಟುವಟಿಕೆಗಳಿಗೆ ನೀಡುವ ಅನುದಾನದ ವಿವರಗಳನ್ನು ಇದು ಒಳಗೊಂಡಿರುತ್ತದೆ. ಹೊಸ ಹಣಕಾಸು ವರ್ಷದಲ್ಲಿನ ಸರ್ಕಾರದ ಖರ್ಚು ವೆಚ್ಚಗಳ (ಬಜೆಟ್ ಅಂದಾಜು) ವಿವರಗಳೂ ಇರುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.