ಸಾಮಾನ್ಯ ಹೂಡಿಕೆದಾರರ ಚಿಂತನೆಗಳನ್ನು, ಮನೋಭಾವಗಳನ್ನು ಬಂಡವಾಳವಾಗಿಸಿ ಅವರ ನಿರೀಕ್ಷೆಗೆ ವಿರುದ್ಧವಾದ ರೀತಿಯಲ್ಲಿ ವರ್ತಿಸುವುದು ಪೇಟೆಯ ಗುಣ. ಕಳೆದ ವಾರ ಭಾರತೀಯ ಷೇರುಪೇಟೆಗಳು ಜಾಗತಿಕ ಪೇಟೆಗಳಂತೆ ಇಳಿಕೆ ಕಾಣುತ್ತಿದ್ದ ಸಮಯದಲ್ಲಿ ವಿದೇಶೀ ವಿತ್ತೀಯ ಸಂಸ್ಥೆಗಳು ರೂ 2,145 ಕೋಟಿ ಹಣ ಹೂಡಿಕೆ ಮಾಡಿದ್ದವು.
ಈ ವಾರವೂ ಮೊದಲ 4 ದಿನ ತೇಜಿಯಾಗಿತ್ತು. ಆದರೆ, ಶುಕ್ರವಾರ ರೂ 427 ಕೋಟಿ ಮಾರಾಟ ಮಾಡಿ, ಸೂಚ್ಯಂಕ 299 ಅಂಶಗಳಷ್ಟು ಕುಸಿಯುವಂತೆ ಮಾಡಿತು. ಇದರಿಂದ ಸೂಚ್ಯಂಕ ಮತ್ತೊಮ್ಮೆ 17 ಸಾವಿರದಗಡಿ ಇಳಿಯಿತು.
ವಾರಾಂತ್ಯದಲ್ಲಿ ಸಂವೇದಿ ಸೂಚ್ಯಂಕವು 45 ಅಂಶಗಳ ಏರಿಕೆಯಿಂದ 16,886 ಅಂಶಗಳಷ್ಟು ಎತ್ತರದಲ್ಲಿತ್ತು. ಮಧ್ಯಮ ಶ್ರೇಣಿಯ ಸೂಚ್ಯಂಕವು 110 ಅಂಶಗಳಷ್ಟು ಏರಿಕೆ ಕಂಡರೆ ಕೆಳಮಧ್ಯಮ ಶ್ರೇಣಿಯ ಸೂಚ್ಯಂಕವು 170 ಅಂಶಗಳಷ್ಟು ಏರಿಕೆ ಪಡೆಯಿತು.
ವಿದೇಶೀ ವಿತ್ತೀಯ ಸಂಸ್ಥೆಗಳು ಒಟ್ಟಾರೆ ಈ ವಾರದಲ್ಲಿ ರೂ 413 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ530 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿದವು. ಷೇರುಪೇಟೆಯ ಬಂಡವಾಳೀಕರಣ ಮೌಲ್ಯವು ಹಿಂದಿನ ವಾರದ ರೂ 61.10 ಲಕ್ಷ ಕೋಟಿಯಿಂದ ರೂ61.52 ಲಕ್ಷ ಕೋಟಿಗೆ ಹೆಚ್ಚಾಗಿತ್ತು.
ಈಗಿನ ದಿನಗಳಲ್ಲಿ ಹಲವಾರು ಕಂಪೆನಿಗಳು ಅತ್ಯಲ್ಪ ಲಾಭಾಂಶಗಳನ್ನು ಪ್ರಕಟಿಸುತ್ತಿವೆ. ಉದಾಹರಣೆಗೆ ಕೆಜಿಎನ್ ಇಂಡಸ್ಟ್ರೀಸ್ ಶೇ 1, ಬ್ರಹ್ಮಪುತ್ರಾ ಇನ್ಫ್ರಾ ಪ್ರಾಜೆಕ್ಟ್, ಸೊನಾಲ್ ಅಡ್ಹೆಸಿವ್ಸ್, ಸಿಮೆಕ್ಸ್ ಫ್ಯಾರಾಮೌಂಟ್ ಕಾಸ್ಮೆಟಿಕ್ಸ್ ನಂತಹವು ಶೇ 5 ರಷ್ಟು ಲಾಭಾಂಶ ಪ್ರಕಟಿಸಿವೆ. ಕೇವಲ ಲಾಭಾಂಶಕ್ಕಾಗಿ ಕೊಳ್ಳದೆ, ಪ್ರಮಾಣವನ್ನರಿತು ಚಟುವಟಿಕೆ ನಡೆಸುವುದು ಅತ್ಯಗತ್ಯ.
ಹೊಸ ಷೇರಿನ ವಿಚಾರ
*ಇತ್ತೀಚೆಗೆ ಪ್ರತಿ ಷೇರಿಗೆ ರೂ100 ರಂತೆ ಸಾರ್ವಜನಿಕರಿಗೆ ವಿತರಣೆ ಮಾಡಿ ಪೇಟೆ ಪ್ರವೇಶಿಸಿದ ಬ್ರೂಕ್ಸ್ ಲ್ಯಾಬೋರೆಟರೀಸ್ 5 ರಂದು `ಬಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆರಂಭದ ದಿನ ರೂ 131 ರಿಂದ ರೂ 57.75 ರವರೆಗೂ ಏರಿಳಿತ ಕಂಡು ವಾರಾಂತ್ಯದಲ್ಲಿ ರೂ 42.20 ರಲ್ಲಿದ್ದು ಹೂಡಿಕೆದಾರರ ಶಾಪಕ್ಕೆ ಗುರಿಯಾಯಿತು. ವಿಶೇಷವೆಂದರೆ ವಹಿವಾಟಾದ 3 ಕೋಟಿ ಷೇರುಗಳಲ್ಲಿ ಅರ್ಧದಷ್ಟನ್ನು ಕೇವಲ ಮೂರು ಕಂಪೆನಿಗಳು ಚಟುವಟಿಕೆ ನಡೆಸಿವೆ.
*ಪ್ರತಿ ಷೇರಿಗೆ ರೂ 256 ರಂತೆ ಸಾರ್ವಜನಿಕ ವಿತರಣೆ ಮಾಡಿದ ಟಿ.ಡಿ. ಪವರ್ ಸಿಸ್ಟಂಸ್ ಲಿ. ಕಂಪೆನಿಯು 8 ರಿಂದ `ಬಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆರಂಭದ ದಿನ ರೂ 242 ರಿಂದ ರೂ 308 ರವರೆಗೂ ಏರಿಳಿತ ಕಂಡು ರೂ 305.90ರಲ್ಲಿ ವಾರಾಂತ್ಯ ಕಂಡಿತು. ಮೊದಲನೆಯ ದಿನದ 1.16 ಕೋಟಿ ಷೇರುಗಳ ವಹಿವಾಟಿನಲ್ಲಿ ಕೇವಲ ಎರಡು ವಹಿವಾಟು ಸಂಸ್ಥೆಗಳ ಚಟುವಟಿಕೆ ಅರ್ಧದಷ್ಟನ್ನು ಮೀರಿದ್ದು ಗಮನಾರ್ಹ.
*ಜಯಪುರ ಮತ್ತು ಕೊಲ್ಕತ್ತಾ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ರೂಪಾ ಅಂಡ್ ಕೊ ಕಂಪೆನಿಯು ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ `ಟಿ~ ಗುಂಪಿನಲ್ಲಿ 9 ರಿಂದ ವಹಿವಾಟಿಗೆ ಬಿಡುಗಡೆಯಾಗಿ ರೂ196 ರಿಂದ ರೂ 300 ರವರೆಗೂ ಏರಿಳಿತ ಕಂಡು ರೂ 200 ರಲ್ಲಿ ವಾರಾಂತ್ಯ ಕಂಡಿತು.
ಬಂಡವಾಳ ಕಡಿತದ ನಂತರ ಮರು ಬಿಡುಗಡೆ
ನಾಥ್ ಸೀಡ್ಸ್ ಕಂಪೆನಿಯ ಷೇರು ಬಂಡವಾಳವನ್ನು ಕಳೆದ 2004 ರಲ್ಲಿ ಮೊಟಕುಗೊಳಿಸಿದ್ದು 8 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಮರು ಬಿಡುಗಡೆಯಾಯಿತು.
ಲಾಭಾಂಶ ವಿಚಾರ
ಅಸ್ಸಾ ಕಂಪೆನಿ ಶೇ 20, ಬನಾರಸ್ ಬೀಡ್ಸ್ ಶೇ 25, ಜೆವಿಎಲ್ ಆಗ್ರೊ ಶೇ 20, ಜೆಯುಶಿನ್ ಶೇ 30, ಕೀ ನೋಟ್ ಕಾರ್ಪೊರೇಟ್ ಸರ್ವಿಸಸ್ ಶೇ 15, ಶಿಪ್ಪಿಂಗ್ ಕಾರ್ಪೊರೇಷನ್ ಶೇ 25 (ನಿಗದಿತ ದಿನ 13.09.11).
ಬೋನಸ್ ಷೇರಿನ ವಿಚಾರ
*ಮ್ಯಾಕ್ ಚಾರ್ಲ್ಸ್ ಕಂಪೆನಿ ಪ್ರಕಟಿಸಿರುವ 1:1ರ ಅನುಪಾತದ ಬೋನಸ್ ಷೇರಿಗೆ ಸೆಪ್ಟೆಂಬರ್ 15 ನಿಗದಿತ ದಿನವಾಗಿದೆ.
*ಬೋನಸ್ ಷೇರಿನ ವಿಚಾರದ ಪರಿಶೀಲನೆ ಮಾಡಲಿದ್ದ ನ್ಯೂಟೆಕ್ ಇಂಡಿಯಾ ಲಿಮಿಟೆಡ್ ಸಭೆಯನ್ನು ಮುಂದೂಡುವ ಮೂಲಕ ಬೋನಸ್ ಪರಿಶೀಲನೆ ಮುಂದೂಡಿದೆ.
ಹಕ್ಕಿನ ಷೇರಿನ ವಿಚಾರ
ಎಲ್ಜಿಬಿ ಪೋರ್ಜ್ ಲಿ ಹಕ್ಕಿನ ಷೇರು ವಿತರಣೆಯನ್ನು ಕೈಬಿಟ್ಟಿದೆ.
ಮುಖಬೆಲೆ ಸೀಳಿಕೆ ವಿಚಾರ
*ಕ್ರಿಸಿಲ್ ಕಂಪೆನಿ ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ1ಕ್ಕೆ ಸೀಳಲು ಸೆಪ್ಟೆಂಬರ್ 30 ನಿಗದಿತ ದಿನವಾಗಿದೆ.
*ಹ್ಯಾಟ್ಸನ್ ಆಗ್ರೊ ಫ್ರಾಡಕ್ಟ್ಸ್ ರೂ 2 ರಿಂದ ರೂ 1ಕ್ಕೆ ಮುಖಬೆಲೆ ಸೀಳಿಕೆಗೆ ಅಕ್ಟೋಬರ್ 4 ನಿಗದಿತ ದಿನವಾಗಿದೆ.
*ಒಡಿಸ್ಸಿ ಕಾರ್ಪೊರೇಷನ್ ಕಂಪೆನಿ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ 5ಕ್ಕೆ ಸೀಳಲಿದೆ.
ವಿತ್ತೀಯ ಸಂಸ್ಥೆಗಳ ಚಟುವಟಿಕೆ
*ಎಸ್ಬಿಐ ಮ್ಯುಚುಯಲ್ ಫಂಡ್ 5 ರಂದು 83.97 ಲಕ್ಷ ಸ್ಪೈಸ್ಜೆಟ್ ಷೇರನ್ನು ಖರೀದಿಸಿದೆ.
*ಮಾರ್ಗನ್ ಸ್ಟಾನ್ಲಿ ವಿವಿಧ ಯೋಜನೆಯಡಿ 92.48 ಲಕ್ಷ ಸ್ಪೈಸ್ಜೆಟ್ ಷೇರನ್ನು 5 ರಂದು ಮಾರಾಟ ಮಾಡಿದೆ.
*ಫಿಡಿಲಿಟಿ ಮೇನೇಜ್ಮೆಂಟ್ಸ್ ಅಂಡ್ ರಿಸರ್ಚ್ ಕಂಪೆನಿ ಲಿ. 8 ರಂದು 3.27 ಲಕ್ಷ ಇಂಡಿಯಾ ಬುಲ್ ಹೋಲ್ಸೆಲ್ ಸರ್ವಿಸಸ್ ಷೇರನ್ನು ಮಾರಾಟ ಮಾಡಿದೆ.
*ಡಚ್ ಬ್ಯಾಂಕ್ ಟ್ರಸ್ಟ್ ಕಂ. 8 ರಂದು 5.93 ಲಕ್ಷ ಇಂಡಿಯಾಬುಲ್ ಹೋಲ್ಸೇಲ್ ಸರ್ವಿಸಸ್ ಷೇರನ್ನು ಮಾರಾಟ ಮಾಡಿದೆ.
*ವೇಲಾನ್ ಹೋಟೆಲ್ಸ್ ಕಂಪೆನಿಯು ತನ್ನ ಹಕ್ಕಿನ ಷೇರು ವಿತರಣೆಯ ಅಂತಿಮ ದಿನವನ್ನು ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 22 ರವರೆಗೆ ವಿಸ್ತರಿಸಿದೆ.
ವಾರದ ಪ್ರಶ್ನೆ
ಇತ್ತೀಚಿನ ದಿನಗಳಲ್ಲಿ ಚಿನ್ನ-ಬೆಳ್ಳಿ ಬೆಲೆಗಳು ಹೆಚ್ಚಿನ ಏರಿಕೆ ಕಾಣುತ್ತಿದ್ದು ಹೂಡಿಕೆ ಸುರಕ್ಷಿತವೆ? ಹೆಚ್ಚಿನ ಏರುಪೇರು ಏಕೆ, ತಿಳಿಸಿರಿ?
ಉತ್ತರ: ಚಿನ್ನ-ಬೆಳ್ಳಿ ಮೇಲಿನ ಹೂಡಿಕೆ ಸುರಕ್ಷಿತ ಎನ್ನುವುದು ವಿಶ್ವದಾದ್ಯಂತ ಮೂಡಿರುವ ಭಾವನೆ. ಹಾಗಾಗಿ ಎಲ್ಲಾ ದೇಶಗಳು ಚಿನ್ನದ ಸಂಗ್ರಹ ಮಾಡುವುದು ರೂಢಿಯಾಗಿದೆ.
ಈಗಿನ ದಿನಗಳಲ್ಲಿ ಎಲ್ಲವನ್ನೂ ವ್ಯಾವಹಾರಿಕ ದೃಷ್ಠಿಯಿಂದ ಕಾಣುವುದು ವಾಡಿಕೆಯಾಗಿದೆ.
ಇಂತಹ ಸಂದರ್ಭದಲ್ಲಿ ಈ ಪ್ರಮುಖ ಲೋಹಗಳನ್ನು `ಡಿ-ಮ್ಯಾಟ್~ ರೂಪದಲ್ಲಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಚಿನ್ನವಂತೂ ಕಳೆದ ನಾಲ್ಕೈದು ತಿಂಗಳಲ್ಲಿ ಸುಮಾರು ಶೇ 40 ರವರೆಗೂ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆಯು ಈ ಅವಧಿಯಲ್ಲಿ ರೂ15 ಸಾವಿರಕ್ಕೂ ಹೆಚ್ಚಿನ ಅಂತರದ ಏರಿಳಿತ ಕಂಡಿದೆ. ಬೆಳ್ಳಿ ಧಾರಣೆಯು ಅಕ್ಷಯ ತೃತೀಯದ ಸಂದರ್ಭದಲ್ಲಿ ರೂ 75 ಸಾವಿರ ತಲುಪಿ, ಕೆಲವೇ ದಿನಗಳಲ್ಲಿ ರೂ 51 ಸಾವಿರಕ್ಕೆ ಕುಸಿದಿತ್ತು. ಈಗ ರೂ 67-68 ಸಾವಿರದಲ್ಲಿದೆ. ಇದು ದಿನಂಪ್ರತಿ ಸುಮಾರು 2 ರಿಂದ 3 ಸಾವಿರ ರೂಪಾಯಿಗಳ ಏರಿಳಿತ ಪ್ರದರ್ಶಿಸುತ್ತಿರುವುದು ಸಟ್ಟಾ ವ್ಯಾಪಾರದ ಪ್ರಭಾವವೇ ಸರಿ.
ನ್ಯಾಶನಲ್ ಸ್ಪಾಟ್ ಎಕ್ಸ್ಚೇಂಜ್ನಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಸೀಸ ಮತ್ತು ತವರಗಳನ್ನು ಖರೀದಿಸಬಹುದು. ಮಾರಾಟ ಮಾಡಬಹುದು. ಈ ವಹಿವಾಟು ಪೂರ್ಣವಾಗಿ ಡಿಮ್ಯಾಟ್ ರೂಪದಲ್ಲಿರುತ್ತದೆ. ಷೇರುಪೇಟೆಯ ವಹಿವಾಟಿನಂತೆಯೇ ಆದರೂ ಡಿಮ್ಯಾಟಾ ಖಾತೆ ಬೇರೆಯಾಗಿರುತ್ತದೆ. ಇಲ್ಲಿ ದೈನಂದಿನ ವಹಿವಾಟು ಮತ್ತು ವಿಲೇವಾರಿ ವಹಿವಾಟುಗಳು ಇರುವುದರಿಂದ ವಹಿವಾಟಿನ ಗಾತ್ರ ಹೆಚ್ಚಾಗಿರುತ್ತದೆ ಹಾಗಾಗಿ ಏರಿಳಿತಗಳ ಪ್ರಭಾವ, ಒತ್ತಡ ಹೆಚ್ಚಾಗಿರುತ್ತದೆ. ಇದನ್ನು ಸುರಕ್ಷಿತವೆನ್ನಬಹುದೇ?
ಈಗ ಮತ್ತೊಂದು ವಿಧದ ಚಟುವಟಿಕೆಯೂ ಜಾರಿಯಾಗಿದೆ ಅದೆಂದರೆ ಷೇರುಪೇಟೆಯ ಮಾರ್ಜಿನ್ ಟ್ರೇಡಿಂಗ್, ಐಪಿಒ ಫಂಡಿಂಗ್ನಂತೆ ನ್ಯಾಶನಲ್ ಸ್ಪಾಟ್ ಎಕ್ಸ್ಚೇಂಜ್ನಲ್ಲಿ ಕೊಳ್ಳುವ ಇ-ಚಿನ್ನ, ಇ-ಬೆಳ್ಳಿಗಳಿಗೆ `ಫಂಡಿಂಗ್~ ವ್ಯವಸ್ಥೆ ಜಾರಿಯಾಗಿದೆ. ಈ ರೀತಿಯ ಚಟುವಟಿಕೆಯಲ್ಲಿ ಶೇ. 75 ರವರೆಗೂ ಸಾಲ ನೀಡುವರು. ಹತ್ತು-ಹಲವಾರು ನಿಯಮಗಳ ಆಧಾರದ ಮೇಲೆ ಈ ವ್ಯವಸ್ಥೆಯನ್ನು ರೂಪಿಸಿಕೊಂಡಿರುತ್ತಾರೆ.
ವಹಿವಾಟಿನ ಗಾತ್ರದ ಆಧಾರದ ಮೇಲೆ ಬಡ್ಡಿ ಹಣವೂ ಹೆಚ್ಚು- ಕಡಿಮೆಯಾಗುವುದು. ಹೂಡಿಕೆದಾರರು ಇಂತಹ ವಹಿವಾಟಿನಲ್ಲಿ ತೊಡಗಿಸಿಕೊಳ್ಳುವ ಮುನ್ನ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಅವಶ್ಯಕ. ಈ ಡಿಮ್ಯಾಟ್ ಚಿನ್ನ-ಬೆಳ್ಳಿಗಳನ್ನು ಭೌತಿಕವಾಗಿ ಪರಿವರ್ತಿಸಿಕೊಳ್ಳಲೂ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು.
ಇಂತಹ ವಾತಾವರಣದಲ್ಲಿ ಚಿನ್ನ-ಬೆಳ್ಳಿಗಳೂ ಸಹ ಸುರಕ್ಷಿತ ಹೂಡಿಕೆ ಎನ್ನಲಾಗದು ಆದರೆ ಒಂದು ಮಾತು ಸಹಜ. ಚಿನ್ನ-ಬೆಳ್ಳಿಗಳು ಆಂತರಿಕವಾಗಿ ಸುಭದ್ರ, ಷೇರುಗಳಲ್ಲಿ ಕಂಪೆನಿಗಳ ಆಂತರಿಕ ಸಾಧನೆ ಏರಿಳಿತ ಕಾಣುತ್ತವೆ. ಇಲ್ಲಿ ಹಾಗಲ್ಲ ಕೇವಲ ಪೇಟೆಯ ಸ್ಥಿತಿಯನ್ನು ಅವಲಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.