ADVERTISEMENT

ಜ್ಞಾನ ಜ್ಯೋತಿ ಬೆಳಗಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 6:23 IST
Last Updated 29 ಜುಲೈ 2020, 6:23 IST
ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ
ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ   

ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ

ಕಾಮಿನಿ ನಿನ್ನವಳಲ್ಲ, ಅವು ಜಗಕ್ಕಿಕ್ಕಿದ ವಿಧಿ

ನಿನ್ನೊಡವೆಯೆಂಬುದು ಜ್ಞಾನರತ್ನ!

ADVERTISEMENT

ಅಂತಪ್ಪ ದಿವ್ಯ ರತ್ನವ ಕೆಡಗಡದೆ

ಆ ರತ್ನವ ನೀನಲಂಕರಿಸಿದೆಯಾದಡೆ

ನಮ್ಮ ಗುಹೇಶ್ವರ ಲಿಂಗದಲ್ಲಿ

ನಿನ್ನಿಂದ ಬಿಟ್ಟು ಸಿರಿವಂತರಾರಿಲ್ಲ ಕಾಣಾ, ಎಲೆ ಮನವೆ!

ಭೂಮಿ ಬಂಗಾರ ಕಾಮಿನಿ ತ್ರಿವಿಧಿಗಳು ನಿನ್ನದಲ್ಲ, ಇವು ಜಗಕ್ಕಿಕ್ಕಿದ ವಿಧಿ. ಇವು ಇಲ್ಲದೆ ಜಗತ್ತು ನಡೆಯದು. ಮೂರೂ ಬಹಳ ಆಕರ್ಷಣೀಯ ವಸ್ತುಗಳು. ಇವು ಮನುಷ್ಯನನ್ನು ಭವಬಂಧನಕ್ಕೆ ಸಿಲುಕಿಸುವಂಥವು. ನಿಜವಾದ ಸಂಪತ್ತು ಎಂದು ಜೀವನ ನಂಬಿರುವರು. ಆದರೆ, ಇವೆಲ್ಲವುಗಳನ್ನು ಮೀರಿದ ನಿಜವಾದ ಸಿರಿ ಸಂಪತ್ತು ಜ್ಞಾನರತ್ನವಾಗಿದೆ.

ಜ್ಙಾನರತ್ನವನ್ನು ನೀನು ಅಲಂಕರಿಸಿದೆಯಾದಡೆ, ಭಗವಂತನ ದೃಷ್ಟಿಯಲ್ಲಿ ನೀನೆ ನಿಜವಾದ ಸಿರಿವಂತ. ನಿನ್ನ ಬಿಟ್ಟು ಮತ್ತಾರು ಸಿರಿವಂತರಿಲ್ಲ.

ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದೈತೇ: ಜ್ಞಾನದಂತಹ ಪವಿತ್ರವಾದ ವಸ್ತು ಈ ಜಗತ್ತಿನಲ್ಲಿ ಇನ್ನೊಂದಿಲ್ಲ. ಜ್ಞಾನವಿಲ್ಲದಿದ್ದರೆ ನಮ್ಮ ಬದುಕು ಶೂನ್ಯವಾಗುವುದು. ಅದಕ್ಕಾಗಿ ಶರಣರು, ಸಂತರು ಮಹಾತ್ಮರು ಜ್ಞಾನವನ್ನು ಪ್ರೀತಿಸಿದರು; ಗೌರವಿಸಿದರು; ಪೂಜಿಸಿದರು. ನಮ್ಮ ಅಂತರಂಗದಲ್ಲಿರುವ ಅಜ್ಞಾನ ಅಂಧಕಾರವನ್ನು ಅಳಿಯುವುದಕ್ಕಾಗಿ ಜ್ಞಾನ ಜ್ಯೋತಿಯನ್ನು ಬೆಳಗಿಸಿ. ಬದುಕಿನಲ್ಲಿ ಪರಮಶಾಂತಿ, ಪರಮಾನಂದ ನೆಲೆಗೊಳ್ಳುವಂತೆ ಮಾಡುವುದು ಜ್ಞಾನ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದಿರುವರು ಬಸವಣ್ಣ. ಜ್ಞಾನವು ಮಾನವನನ್ನು ಮಹಾದೇವನನ್ನಾಗಿ ಮಾಡುವುದು

ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ರಾಜಗುರು ಸಂಸ್ಥಾನ ಕಲ್ಮಠ, ಚನ್ನಮ್ಮನ ಕಿತ್ತೂರು, ಬೆಳಗಾವಿ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.