ಕುಷ್ಟಗಿ: ಪಟ್ಟಣದಲ್ಲಿ ಶುಕ್ರವಾರ ಶಿವಶರಣೆ ಇಟಗಿ ಭೀಮಾಂಬಿಕೆ ಜಾತ್ರಾ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರದ ಮೆರವಣಿಗೆ ನಡೆಯಿತು. ಕುಂಭ ಕಳಸ ಹೊತ್ತ ಮಹಿಳೆಯರು, ಮಕ್ಕಳು, ವಿವಿಧ ಸಮುದಾಯಗಳ ಪ್ರಮುಖರು, ಕಲಾಮೇಳದವರು ಮೆರವಣಿಗೆಗೆ ಕಳೆ ತಂದರು.
ಅದಕ್ಕೂ ಮೊದಲು ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ನಡೆದ ಐದು ಜೋಡಿ ಸಾಮೂಹಿಕ ಮದುವೆ ಕಾರ್ಯಕ್ರಮ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ, ಕೊರಡಕೇರಿ ಶರಣಯ್ಯ ಗುರುವಿನ, ಶಿವಾನಂದಯ್ಯ ಗುರುವಿನ ಅವರ ಸಾನಿಧ್ಯದಲ್ಲಿ ನೆರವೇರಿತು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ದ್ಯಾಮಣ್ಣ ಕಟ್ಟಿಹೊಲ, ಹನುಮಂತಪ್ಪ ಕತ್ತಿ, ರಾಮಣ್ಣ ಕಟ್ಟಿಹೊಲ ಹಾಗೂ ಚಂದ್ರಕಾಂತ ವಡಗೇರಿ
ಇದ್ದರು.
ಸಂಜೆ ಉತ್ಸವ (ಉಚ್ಚಾಯ) ಸಂಭ್ರಮ, ಸಡಗರದೊಂಗೆ ನೆರವೇರಿತು. ಡೊಳ್ಳು ಮತ್ತಿತರೆ ಕಲಾವಿದರು ಗಮನಸೆಳೆದರು. ಹಾಲುಮತ ಸೇರಿದಂತೆ ಅನೇಕ ಸಮಾಜದ ಹಿರಿಯರು, ಯುವಕರು ಉತ್ಸವದಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.