ADVERTISEMENT

ಮಾತಾ ಕೈವಲ್ಯಮಯಿ ಬರಹ: ಸುಖ ಎಂಬುದು ಆಂತರಿಕ ಸ್ಥಿತಿ

ಮಾತಾ ಕೈವಲ್ಯಮಯಿ
Published 2 ಡಿಸೆಂಬರ್ 2022, 13:05 IST
Last Updated 2 ಡಿಸೆಂಬರ್ 2022, 13:05 IST
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ   

ಸಾಮಾನ್ಯವಾಗಿ ಜನರು ಭಾವಿಸುತ್ತಾರೆ, ತಮಗೆ ಯಾವ ತೊಂದರೆ ತಾಪತ್ರಯಗಳೂ ಇಲ್ಲದಿದ್ದರೆ ಸುಖಃವಾಗಿರುತ್ತೇವೆ ಎಂದು. ಇದು ಸಮುದ್ರದಲ್ಲಿ ಅಲೆಗಳು ಶಾಂತವಾದ ಮೇಲೆ ನಾನು ಸಮುದ್ರ ಸ್ನಾನ ಮಾಡುತ್ತೇನೆ ಎಂದು ಭಾವಿಸುವಂತೆ!

ತಾಪತ್ರಯಗಳನ್ನು ನಿವಾರಿಸುವುದರಲ್ಲಿ ಇಡೀ ಜೀವನ ಕಳೆದು ಹೋಗುತ್ತದೆ. ಅನುಭವಿಸುವುದಕ್ಕೆ ಸಮಯವೇ ಇರುವುದಿಲ್ಲ. ಈ ಮನೋಭಾವಕ್ಕೆ ಕಾರಣ ಕಷ್ಟಗಳ ಅಭಾವವೇ ಸುಖಃ ಎಂಬ ತಪ್ಪು ಕಲ್ಪನೆ. ಕಷ್ಟಗಳು ಏನೂ ಇಲ್ಲದಿದ್ದರೂ ನಾವು ಸುಖ:ವಾಗಿರುವುದಿಲ್ಲ. ಒಬ್ಬ ಬೌದ್ಧ ಸನ್ಯಾಸಿ ಹೇಳುತ್ತಾರೆ: ನಾವು ಹಲ್ಲು ನೋವಿನಿಂದ ನರಳುತ್ತಿರುವಾಗ ಹಲ್ಲು ನೋವು ಇಲ್ಲದಿದ್ದರೆ ಎಷ್ಟು ಚೆನ್ನಾಗಿರುತ್ತೆ ಎಂದು ಭಾವಿಸುತ್ತೇವೆ. ಆದರೆ, ಹಲ್ಲು ನೋವು ಇಲ್ಲದಿರುವಾಗಲೂ ನಾವೇನೂ ಸುಖ:ವಾಗಿರುವುದಿಲ್ಲ. ಆದ್ದರಿಂದ ಸುಖ: ನಮ್ಮ ಮನೋಭಾವವನ್ನು ಅವಲಂಬಿಸಿರುತ್ತದೆ. ನಾನು ಸುಖ:ವಾಗಿರಬೇಕೆಂದು ಬಯಸಿದರೆ ಕಷ್ಟಗಳ ನಡುವೆಯೂ ನಾನು ಸುಖ:ವಾಗಿರಬಹುದು. ಅವು ಕೇವಲ ಬಾಹ್ಯ ಘಟನೆಗಳು ಅಷ್ಟೇ. ಆದರೆ, ಸುಖ: ಆಂತರಿಕ ಸ್ಥಿತಿ. ನಾವು ಆಂತರಿಕ ಸ್ಥಿತಿಯಲ್ಲಿ ಸ್ಥಿರವಾಗಿ ನಿಂತಾಗ ಬಾಹ್ಯ ಘಟನೆಗಳಾವುವೂ ನಮ್ಮನ್ನು ವಿಚಲಿತಗೊಳಿಸಲಾರವು. ಇದೇ ನಿಜವಾದ ಸುಖ:ದ ಸ್ಥಿತಿ.

ಸುಖ:ವಾಗಲಿ, ದುಃಖವಾಗಲಿ ನಮ್ಮನ್ನು ಬಿಟ್ಟು ಎಲ್ಲಿಗೆ ತಾನೇ ಹೋಗುತ್ತವೆ? ಅವು ನಮ್ಮ ಜೊತೆಗಾರರಿದ್ದಂತೆ. ಅದಕ್ಕೇಕೆ ತಲೆ ಕೆಡಿಸಿಕೊಳ್ಳಬೇಕು? ಜೀವನದಲ್ಲಿ ಯಾರೂ ಅಪಾಯಗಳನ್ನು ಎದುರಿಸದೆ ಇರುವುದಕ್ಕೆ ಆಗುವುದಿಲ್ಲ. ಕಷ್ಟಗಳು ಬಂದೇ ಬರುತ್ತವೆ. ಆದರೆ, ಅವುಗಳೆಲ್ಲ ಹಾಗೆ ಇರುವುದಿಲ್ಲ. ಸೇತುವೆ ಕೆಳಗೆ ಹರಿಯುವ ನೀರಿನಂತೆ ಆ ಕಷ್ಟಗಳು ಕೂಡ ಬಂದು ಮಾಯವಾಗಿ ಬಿಡುತ್ತವೆ. ಹಾಗಾಗಿ ನಾವು ಸೇತುವೆಯಂತೆ ದೃಢವಾಗಿರಬೇಕು. ಎಂತಹ ಕಷ್ಟ ವಿಪತ್ತುಗಳ ಮಹಾಪೂರವೇ ಬಂದರೂ ಕೊಚ್ಚಿಕೊಂಡು ಹೋಗದಂತಿರಬೇಕು. ಇದು ನಮ್ಮ ಆಂತರಿಕ ಸ್ಥಿರತೆಯನ್ನು ಅವಲಂಬಿಸಿರುತ್ತದೆ. ಸೇತುವೆಯು ಭೂಮಿಯ ಆಳದಲ್ಲಿ ಗಟ್ಟಿಯಾಗಿ ನಿಂತಿರುವಂತೆ ನಾವು ವ್ಯಕ್ತಿತ್ವದ ಆಳದಲ್ಲಿ ನಮ್ಮ ಸ್ಥಿರತೆಯನ್ನು ಪಡೆಯಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.