ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ತುಂಗಭದ್ರಾ ನದಿದಂಡೆಯ ಗ್ರಾಮ ಸುಕ್ಷೇತ್ರ ಉಕ್ಕಡಗಾತ್ರಿಯು ಪವಾಡಪುರುಷ, ಭವರೋಗ ಹರವೈದ್ಯನೆಂದೇ ಖ್ಯಾತಿ ಪಡೆದ ಕರಿಬಸವೇಶ್ವರ ಸ್ವಾಮಿ ಅಜ್ಜಯ್ಯನ ಗದ್ದುಗೆಯ ನೆಲೆವೀಡು.
ಪ್ರತಿ ವರ್ಷ ಮಾಘ ಬಹುಳ ಅಮಾವಾಸ್ಯೆಯಿಂದ ಫಾಲ್ಗುಣ ಶುದ್ಧ ಷಷ್ಠಿ ತನಕ ಒಂದು ವಾರ ಕಾಲ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಮಹಾರಥೋತ್ಸವ, ಪಲ್ಲಕ್ಕಿ ಉತ್ಸವ ಬೆಳ್ಳಿ ರಥೋತ್ಸವ ಪ್ರಸಿದ್ಧಿಯಾಗಿದ್ದು, ರಾಜ್ಯದ ವಿವಿಧಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವರ್ಷ ಫೆ. 23ರಿಂದ ಮಾರ್ಚ್ 1ರ ತನಕ ಉತ್ಸವ ಆಯೋಜಿಸಲಾಗಿದ್ದು, ಫೆ. 24ರಂದು ಮಹಾರಥೋತ್ಸವ ಜರುಗಲಿದೆ.
ಪವಾಡಪುರುಷ: ಮಾನಸಿಕ ರೋಗಿಗಳು, ಅಸ್ವಸ್ಥರು, ರೋಗರುಜಿನಗಳಿಂದ ಬಳಲಿ ಚಿಕಿತ್ಸೆಯಿಂದ ಗುಣಮುಖರಾಗದವರು ತುಂಗಭದ್ರೆಯಲ್ಲಿ ಸ್ನಾನಮಾಡಿ ಕ್ಷೇತ್ರಾಧಿಪತಿ ವಿಭೂತಿಪುರುಷ ಅಜ್ಜಯ್ಯನ ದರ್ಶನದಿಂದ ಪರಿಹಾರ ಕಂಡಿದ್ದಾರೆ ಎನ್ನುವವರಿದ್ದಾರೆ.ಕೆಲವರು ಗದ್ದುಗೆಯಲ್ಲಿ ಸೇವೆ ಮಾಡಿ ರೋಗದಿಂದ ಮುಕ್ತಿ ಪಡೆದು ವೈದ್ಯಕೀಯ ಶಾಸ್ತ್ರಕ್ಕೆ ಸವಾಲಾಗಿರುವುದು ಕ್ಷೇತ್ರದ ವಿಶೇಷತೆ ಎಂದು ಪ್ರತೀತಿ.
ಜಾತ್ರೆ ವೇಳೆ ಪ್ರತಿ ನಿತ್ಯ ಸಂಜೆ ನಡೆಯುವ ಸಾಮೂಹಿಕ ಭಜನೆ ಭಕ್ತ ಸಮುದಾಯದಲ್ಲಿ ಮಾನಸಿಕ ನೆಮ್ಮದಿ ಮೂಡಿಸುತ್ತಿದೆ.
ಈ ಕ್ಷೇತ್ರಕ್ಕೆ ಬೆಂಗಳೂರು ಸೇರಿ ಜಿಲ್ಲಾ ಕೇಂದ್ರ ದಾವಣಗೆರೆ, ಹರಿಹರ, ಹೊನ್ನಾಳಿ, ರಾಣೆಬೆನ್ನೂರುನಿಂದ ರಾಜ್ಯ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ ಸೌಲಭ್ಯವಿದೆ. ಭಕ್ತರಿಗೆ ಉಳಿದುಕೊಳ್ಳಲು ಉಚಿತ ವಸತಿಗೃಹಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.