ADVERTISEMENT

ಅಭಿವೃದ್ಧಿಗೆ ಶಾಶ್ವತ ಯೋಜನೆ ರೂಪಿಸಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಹೊಳೆನರಸೀಪುರ: ಮುಖ್ಯಮಂತ್ರಿಗಳು ಮಾತ್ರ ಸದಾ ಆನಂದದಿಂದ ಇದ್ದರೆ ಸಾಲದು, ಕನ್ನಡ ನಾಡಿನ ಜನರೆಲ್ಲರೂ ಆನಂದದಿಂದ ಇರಬೇಕು.  ನಾಡಿನ ಅಭಿವೃದ್ಧಿಗೆ ಪೂರಕವಾದ ಶಾಶ್ವತ ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಆಗ್ರಹಿಸಿದರು.

ಸೋಮವಾರ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಜನರು ಖಾಸಗಿ ಶಾಲೆಗಳತ್ತ ಓಡುತ್ತಿದ್ದಾರೆ. ಕನ್ನಡ ಶಾಲೆಗಳಲ್ಲಿ ಉತ್ತಮ ಪಾಠ ನಡೆಯಲು ಬೇಕಾದ ಸೌಲಭ್ಯಗಳನ್ನು ನೀಡಬೇಕಿದೆ. ಹಳ್ಳಿಯ ಜನರು ತಮ್ಮ ಹೊಲ, ಗದ್ದೆಗಳನ್ನು ಶಾಲೆಗಾಗಿ ನೀಡಿದ್ದಾರೆ. ಶಾಲೆಯನ್ನು ಮುಚ್ಚುವುದು ಮೂರು ನಿಮಿಷದ ಕೆಲಸ. ಆದರೆ, ಶಾಲೆ ತರೆಸಲು ಜನರು ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ಶಿಕ್ಷಣ ಸಚಿವರಿಗೆ ತಿಳಿದಿಲ್ಲ. ಯಾವುದೇ ಕನ್ನಡ ಶಾಲೆ ಮುಚ್ಚುವ ಪ್ರಯತ್ನ ಮಾಡಬೇಡಿ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನ ಪ್ರತೀ ವರ್ಷ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆಯಬೇಕು. ಇದಕ್ಕಾಗಿ ರಾಜ್ಯ ಮಟ್ಟಕ್ಕೆ ರೂ 2 ಕೋಟಿ, ಜಿಲ್ಲಾ ಮಟ್ಟಕ್ಕೆ ರೂ. 25 ಲಕ್ಷ, ತಾಲ್ಲೂಕು ಮಟ್ಟಕ್ಕೆ ರೂ. 5 ಲಕ್ಷ ಹಣ ಮೀಸಲಿಡಿ ಎಂದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ರಾಷ್ಟ್ರ ಧ್ವಜಾರೋಹಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉದಯರವಿ ಕನ್ನಡ ಧ್ವಜಾರೋಹಣ ಮಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ವೆಂಕಟಸ್ವಾಮಿ ಪರಿಷತ್‌ನ ಧ್ವಜಾರೋಹಣ ನೆರವೇರಿಸಿದರು.

ಸಮ್ಮೇಳನಾಧ್ಯಕ್ಷ ಡಾ.ಕೆ.ಸಿ. ಮರಿಯಪ್ಪ, ಪುರಸಭಾಧ್ಯಕ್ಷೆ ವಿನೋದಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅನಂತ್ ಕುಮಾರ್, ಟಿ. ಮಲ್ಲೇಶ್, ಗೌರವಾಧ್ಯಕ್ಷ ತಹಶೀಲ್ದಾರ್ ವಿ. ಮಂಜುನಾಥ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.