ADVERTISEMENT

ಕಡಿಮೆ ಅವಧಿಯಲ್ಲಿ ಬಿಎಸ್‌ಆರ್ ಜನಪ್ರಿಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಗಂಗಾವತಿ: `ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಉದಯಿಸಿ ಕಡಿಮೆ ಕಾಲಾವಧಿಯಲ್ಲಿ ರಾಜ್ಯದ ಬಹುತೇಕ ಜಿಲ್ಲೆ ಮತ್ತು ತಾಲ್ಲೂಕಿನ ಪ್ರತಿ ಹಳ್ಳಿಗಳ ಗ್ರಾಮೀಣ ಭಾಗದಲ್ಲಿ ಜನಪ್ರಿಯವಾಗಿದೆ~ ಎಂದು ಪಕ್ಷದ ಸಮನ್ವಯ ಸಮಿತಿ ಸದಸ್ಯ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ನಗರದ ರಾಣಾ ಪ್ರತಾಪಸಿಂಗ್ ವೃತ್ತದಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ `ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ~ಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜಕೀಯ ಪಕ್ಷವೊಂದು ಉದಯಿಸಿ ಕೇವಲ ಕೆಲವೇ ತಿಂಗಳಲ್ಲಿ ರಾಜ್ಯದ ಮನೆ ಮಾತಾಗಿರುವ ಉದಾಹರಣೆ ಬೇರೊಂದು ಇಲ್ಲ. ಆದರೆ ಬಿಎಸ್‌ಆರ್ ಪಕ್ಷ ಆ ಸಾಧನೆ ಮಾಡಿದೆ ಎಂದು ಅವರ ನುಡಿದರು.
 
`ಪ್ರತಿ ಹಳ್ಳಿಯ ಬಡವ, ಶ್ರಮಿಕ ಮತ್ತು ರೈತರು ನಮ್ಮ ಪಕ್ಷದತ್ತ ಬಹುನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರತಿಯೊಂದು ಹಳ್ಳಿಯ, ಪ್ರತಿಯೊಬ್ಬ ಬಡವನ ಕಷ್ಟ ಕಾರ್ಪಣ್ಯಗಳನ್ನು ಅರಿಯಲು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಶ್ರೀರಾಮುಲು ಸಂಕಲ್ಪ ಮಾಡಿ, ಪಾದಯಾತ್ರೆಗಳನ್ನು ಹಮ್ಮಿಕೊಂಡಿದ್ದಾರೆ. ಇದೇ ತಿಂಗಳ 14ರಿಂದ ಕೋಲಾರ ಮತ್ತು ಚಿಕ್ಕಮಗಳೂರಿನಲ್ಲಿ ಯಾತ್ರೆ ನಡೆಯಲಿದೆ~ ಎಂದು ಅವರ ವಿವರ ನೀಡಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರದಲ್ಲೂ ಸ್ಪರ್ಧಿಸಲಾಗುತ್ತದೆ. ಯಾವ ಕ್ಷೇತ್ರದಲ್ಲಿಯೂ ಇತರ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಜಿಲ್ಲಾ ಸಂಚಾಲಕ ಟಿ, ರತ್ನಾಕರ ಮಾತನಾಡಿದರು.

ಮುಖಂಡ ಪ್ರಭುಗೌಡ, ಯಲಬುರ್ಗಾ ತಾಲ್ಲೂಕು ಸಂಚಾಲಕ ವೀರಪ್ಪ, ಗಂಗಾವತಿಯ ಸಂಚಾಲಕ ಟಿ. ರಾಮಚಂದ್ರ, ಸಹ ಸಂಚಾಲಕರಾದ ಶರಣಬಸವ ಗದ್ದಿ, ಯಸೂಫ್, ಗಿರೀಶ ಗಾಯಕವಾಡ, ಶರಣಪ್ಪ ಕಟ್ಟಿಮನಿ ಇತರರು ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.