ಚಿತ್ರದುರ್ಗ: ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಚೆನ್ನಕ್ಕಿ ಹೊಂಡ, ಮಂಡಕ್ಕಿಬಟ್ಟಿ ಪ್ರದೇಶ ಹಾಗೂ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಹಿಂಭಾಗದ ನಿವಾಸಿಗಳು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಬಿ.ಡಿ. ರಸ್ತೆಯನ್ನು ಸೋಮವಾರ ಬಂದ್ ಮಾಡಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಒಂದು ಗಂಟೆ ಕಾಲ ರಸ್ತೆಯ್ಲ್ಲಲಿ ಬಿಂದಿಗೆ ಇಟ್ಟು ವಾಹನ ಸಂಚಾರ ತಡೆದ ನಾಗರಿಕರು, ಇದುವರೆಗೂ ತಮ್ಮ ಸಮಸ್ಯೆಗೆ ಯಾರೂ ಸ್ಪಂದಿಸಿಲ್ಲ ಎಂದು ದೂರಿದರು.
ಈ ಬಡಾವಣೆಗಳ್ಲ್ಲಲಿ 8 ದಿನಗಳಿಂದ ನೀರು ಪೂರೈಸಿಲ್ಲ. ಬೇರೆ ಸ್ಥಳಗಳಿಗೆ ನೀರು ತರಲು ಹೋದರೆ ಅಲ್ಲಿಯೂ ನಮಗೆ ನೀರು ಕೊಡುತ್ತಿಲ್ಲ. ಯೂನಿಯನ್ ಪಾರ್ಕ್ನಿಂದ ನೀರು ತರಬೇಕಿದೆ. ಸಣ್ಣ ಮಕ್ಕಳು, ಮಹಿಳೆಯರು, ವೃದ್ಧರು ಸಹ ನೀರು ತರುತ್ತಿದ್ದಾರೆ. ಪಾರ್ಕ್ನಿಂದ ನೀರು ತರಲು ಮುಖ್ಯ ರಸ್ತೆ ದಾಟಬೇಕು. ಇದರಿಂದ ಅಪಘಾತದ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಪ್ರದೇಶಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಕೊಳವೆಬಾವಿ ಕೆಟ್ಟು ಒಂದು ತಿಂಗಳಾದರೂ ದುರಸ್ತಿ ಮಾಡಿಲ್ಲ. ನೀರಿನ ಸಮಸ್ಯೆಯನ್ನು ನಗರಸಭೆ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಮನವಿ ಮಾಡಿದ್ದರೂ ಪರಿಹಾರ ದೊರೆತಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಹೋಗಿ ಪ್ರತಿಭಟನೆ ಮಾಡಿದರೆ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ. ಬದಲಾಗಿ ಅವರೇ ಇಲ್ಲಿಗೆ ಬಂದು ಸಮಸ್ಯೆ ಬಗೆಹರಿಸುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಕುಳಿತರು. ಕೊನೆಗೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ರಸ್ತೆತಡೆ ತೆರವುಗೊಳಿಸಿದರು.
ಮುಖಂಡರಾದ ತಿಪ್ಪೇಸ್ವಾಮಿ, ಇಮ್ತಿಯಾಜ್ ಬಾಷಾ, ಮಾಲಾ, ಕೆಂಚಪ್ಪ, ತಿಪ್ಪಮ್ಮ, ಬಾಬು ಖಾನ್, ಜೈನಾಬಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.