ಮಡಿಕೇರಿ: ವಿರಾಜಪೇಟೆಯ ದಟ್ಟಾರಣ್ಯದಲ್ಲಿ ನಿಸರ್ಗದತ್ತ ಗುಹೆಯನ್ನು ಅರಣ್ಯಾಧಿಕಾರಿಗಳು ಈಚೆಗೆ ಪತ್ತೆ ಹಚ್ಚಿದ್ದಾರೆ. ವಿರಾಜಪೇಟೆಯಿಂದ ಮಾಕುಟ್ಟಕ್ಕೆ ತೆರಳುವ ಮಾರ್ಗದಲ್ಲಿ 15ನೇ ಕಿ.ಮೀ ಆಸುಪಾಸಿನ ವಾಟೆಕೊಳಿಯಿಂದ ಎರಡು-ಎರಡೂವರೆ ಕಿ.ಮೀ ದಟ್ಟಾರಣ್ಯದ ಒಳಗೆ ಹರಿಯುವ ಆ್ಯಂಡರ್ಸನ್ ಹೊಳೆ ಪಕ್ಕದಲ್ಲಿ ಗುಹೆ ಪತ್ತೆಯಾಗಿದೆ.
ಗುಹೆಯು ಎರಡೂವರೆ ಮೀಟರ್ ಎತ್ತರವಿದೆ. 60 ಮೀಟರ್ಗಿಂತಲೂ ಹೆಚ್ಚು ಉದ್ದ ಇರಬಹುದು ಎಂದು ಅಂದಾಜಿಸಲಾಗಿದೆ. ಪ್ರವೇಶ ದ್ವಾರದಿಂದ 10 ಮೀಟರ್ ಒಳಗೆ ಮುಖ್ಯಮಾರ್ಗವು ಟಿಸಿಲು ಒಡೆದಿದ್ದು, 2 ಗುಹೆಗಳಿರುವ ಸಂಶಯವನ್ನೂ ಹುಟ್ಟುಹಾಕಿದೆ.
ಈ ಸ್ಥಳಕ್ಕೆ ತಲುಪಿದ ಅರಣ್ಯಾಧಿಕಾರಿಗಳಿಗೆ ನೀರು ತೊಟ್ಟಿಕ್ಕುವ ಹಾಗೂ ಹರಿಯುವ ಶಬ್ದವು ಗುಹೆಯೊಳಗಿನಿಂದ ಕೇಳಿ ಬಂದಿದೆ. ಇದರರ್ಥ ಗುಹೆಯೊಳಗೆ ನೀರು ಇರುವ ಸಂಭವವಿದೆ. ಗುಹೆಯೊಳಗೆ ಹೋದಂತೆ ಕತ್ತಲೆ ಆವರಿಸುತ್ತದೆ. ಅಲ್ಲದೆ ಆಮ್ಲಜನಕದ (ಆಕ್ಸಿಜನ್) ಕೊರತೆಯ ಬಗ್ಗೆ ಸಂಶಯ ಮೂಡಿದ್ದರಿಂದ ಅರಣ್ಯಾಧಿಕಾರಿಗಳು ಅದರಾಚೆ ಹೋಗುವ ಧೈರ್ಯ ಮಾಡಿಲ್ಲ. ಅಲ್ಲಿಂದ ವಾಪಸ್ಸಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.