ADVERTISEMENT

ಜನಚೇತನ ಯಾತ್ರೆ ಅರ್ಥಹೀನ: ಕಾಂಗ್ರೆಸ್ ಟೀಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST

ರಾಯಚೂರು: ಮಾಜಿ ಉಪ ಪ್ರಧಾನಿ, ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಜಾಗೃತಿಗೆ ದೇಶವ್ಯಾಪಿ ನಡೆಸುತ್ತಿರುವ ಜನಚೇತನ ಯಾತ್ರೆ ರಾಜ್ಯಕ್ಕೆ ಆಗಮಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.

ಭ್ರಷ್ಟಾಚಾರದ ವಿರುದ್ಧ ದೇಶವ್ಯಾಪಿ ಜನಜಾಗೃತಿಗೆ ಒಂದೆಡೆ ಅಡ್ವಾಣಿ ಅವರು ಜನಚೇತನ ಯಾತ್ರೆ ಕೈಗೊಂಡಿದ್ದಾರೆ. ಮತ್ತೊಂದೆಡೆ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವರಾದ ಕೃಷ್ಣಯ್ಯಶೆಟ್ಟಿ, ಜನಾರ್ದನರೆಡ್ಡಿ, ಕಟ್ಟಾ ಸುಬ್ರಮಣ್ಯ ನಾಯ್ಡು ಹಲವರು ಜೈಲು ಸೇರಿದ್ದಾರೆ. ಇನ್ನೂ ಅನೇಕರು ಜೈಲು ಸೇರುವ ಸರದಿಯಲ್ಲಿದ್ದಾರೆ. ಈ ಸ್ಥಿತಿಯಲ್ಲಿ ಕರ್ನಾಟಕಕ್ಕೆ ಅಡ್ವಾಣಿ ಅವರ ಜನಚೇತನ ಯಾತ್ರೆ ಆಗಮಿಸುತ್ತಿರುವುದಕ್ಕೆ ಅರ್ಥವೇ ಇಲ್ಲ ಎಂದು ಕಾರ್ಯಕರ್ತರು ಪ್ರಶ್ನಿಸಿದರು.

ಸರ್ಕಾರದ ಅವ್ಯವಹಾರ, ಅಕ್ರಮಗಳ ಬಗ್ಗೆ ವ್ಯಾಪಕ ಆರೋಪಗಳು, ದೂರುಗಳು ಎದುರಾಗುತ್ತಿವೆ. ಬಿಜೆಪಿ ಪಕ್ಷದ ಆಡಳಿತ ಇರುವ ಇಲ್ಲಿನ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಚಿವರಾದ ಮುರುಗೇಶ ನಿರಾಣಿ, ಆರ್. ಅಶೋಕ ಅವರ ವಿರುದ್ಧವೂ ಆರೋಪಗಳಿವೆ. ಈ ಸ್ಥಿತಿಯಲ್ಲಿ ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಏನು ಉಪದೇಶ ಮಾಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಪದಾಧಿಕಾರಿಗಳಾದ  ಕೆ. ಗೋಪಿ, ರಿಯಾಜ್,  ಮುರಳಿ ಯಾದವ್, ರಾಜೇಶ ಮಡಿವಾಳ, ಪ್ರಶಾಂತ, ಆಂಜನೇಯ, ಶಾಂತಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ ವಸಂತಕುಮಾರ, ನಗರ ಘಟಕ ಅಧ್ಯಕ್ಷ ಜಿ ಬಸವರಾಜರೆಡ್ಡಿ, ಕೆ ಶಾಂತಪ್ಪ, ಬಷಿರುದ್ದೀನ್, ರವೀಂದ್ರ ಜಾಲ್ದಾರ್ ಹಾಗೂ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.