ADVERTISEMENT

ತೆಪ್ಪ ಮಗುಚಿ ಐವರ ಸಾವು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರದ ಬಳಿಯ ತುಂಗಭದ್ರಾ ನದಿಯಲ್ಲಿ ತೆಪ್ಪ ಮಗುಚಿ ಐವರು ಸಾವಿಗೀಡಾಗಿದ್ದು, ನಾವಿಕ ಸೇರಿದಂತೆ ಆರು ಜನ ಈಜಿ ದಡ ಸೇರಿರುವ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಧಾರವಾಡ ಜಿಲ್ಲೆಯ ಅಮ್ಮಿನಭಾವಿ ಗ್ರಾಮದ ಫಕೀರಪ್ಪ ಗೂಳಪ್ಪ ಧಾರವಾಡ (22), ಸಿದ್ಧಪ್ಪ ಫಕೀರಪ್ಪ ಹೆಬ್ಬಳ್ಳಿ (18), ಸಿದ್ದಪ್ಪ ಭೀಮಪ್ಪ ಮಲ್ಲೂರ   (23),  ಮುದುಕಪ್ಪ ಅರ್ಜುನಪ್ಪ ಮಲ್ಲೂರ (18) ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಸೆಟ್ಟಿಕೊಪ್ಪ ಗ್ರಾಮದ ಮಂಜಪ್ಪ ಶಿವಪ್ಪ ಉಪಾಧ್ಯಾಯ (25) ಮೃತಪಟ್ಟಿದ್ದಾರೆ.
ಮೃತರ ಪೈಕಿ ಇಬ್ಬರ ಶವಗಳು ಸಂಜೆ 6ರ ವೇಳೆಗೆ ದೊರೆತಿದ್ದು, ಇನ್ನೂ ಮೂವರ ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಶ್ರೀಕ್ಷೇತ್ರ ಮೈಲಾರದ ಜಾತ್ರೆಗೆ ಗ್ರಾಮದ ಅನೇಕರೊಂದಿಗೆ ಟ್ರ್ಯಾಕ್ಟರ್‌ನಲ್ಲಿ ಆಗಮಿಸಿದ್ದ ಯುವಕರು ನದಿಯಲ್ಲಿ ಸ್ನಾನ ಮಾಡಿ, ತೆಪ್ಪದಲ್ಲಿ ವಿಹಾರಕ್ಕೆಂದು ಪಕ್ಕದ ದಂಡೆಗೆ ತೆರಳಿ ವಾಪಸಾಗುವಾಗ ನದಿಯ ತಿರುವಿನಲ್ಲಿ ತೆರೆ ಅಪ್ಪಳಿಸಿ ತೆಪ್ಪ ತಲೆಕೆಳಗಾಯಿತು.

ಅಮ್ಮಿನಭಾವಿ ಗ್ರಾಮದ ನೀಲಪ್ಪ ಬ್ಯಾಹಟ್ಟಿ, ಗಂಗಪ್ಪ ಮಲ್ಲೂರ, ಶಿವಪ್ಪ ಬ್ಯಾಹಟ್ಟಿ, ಮುದುಕಪ್ಪ ಬ್ಯಾಹಟ್ಟಿ ಹಾಗೂ ಮತ್ತೊಬ್ಬ ಯುವಕ ಈಜಿ ದಡ ಸೇರಿದ್ದಾರೆ. ತೆಪ್ಪ ನಡೆಸುತ್ತಿದ್ದ ವ್ಯಕ್ತಿ ಈಜಿ ದಡಸೇರಿ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಹುಡುಕಾಟ ನಡೆದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.