ಸೊರಬ (ಶಿವಮೊಗ್ಗ ಜಿಲ್ಲೆ): ತಾಲ್ಲೂಕಿನ ನಡಹಳ್ಳಿ ಮತ್ತು ಮರೂರು ಗ್ರಾಮದಲ್ಲಿ ಗುರುವಾರ ದಂಡಾವತಿ ಅಣೆಕಟ್ಟು ಯೋಜನೆಗೆ ಸರ್ವೇ ಕಾರ್ಯಾಚರಣೆ ಗ್ರಾಮಸ್ಥರ ವಿರೋಧದ ನಡುವೆಯೂ ನಡೆಯಿತು.
ಪೊಲೀಸ್ ಬಂದೋಬಸ್ತ್ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ, ರೈತರು ಮತ್ತು ಗ್ರಾಮಸ್ಥರು ತೀವ್ರ ವಿರೋಧ ಪಡಿಸಿದರು. ಆಕ್ರೋಶಗೊಂಡ ರೈತರು ಸರ್ವೇ ಕಾರ್ಯಕ್ಕೆ ಬಳಸುತ್ತಿದ್ದ ಚೈನ್, ಕಾಗದಪತ್ರ, ನಕ್ಷೆ ಮತ್ತು ಬೋರ್ಡ್ಗಳನ್ನು ಕಿತ್ತುಕೊಂಡರು.
ಸ್ಥಳದಲ್ಲಿದ್ದ ಪೊಲೀಸರು ಮತ್ತು ಉಪ ವಿಭಾಗಾಧಿಕಾರಿ ಜತೆಗೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿ, ಒಂದು ಹಂತದಲ್ಲಿ ಘರ್ಷಣೆಗಿಳಿದರು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಪೊಲೀಸರು ದಂಡಾವತಿ ಯೋಜನಾ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ವಾಮದೇವಗೌಡ, ಮಂಜಪ್ಪ ಬನದಕೊಪ್ಪ, ಲಕ್ಷ್ಮಣಪ್ಪ ಅವರನ್ನು ಒಳಗೊಂಡಂತೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದರು.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ ರೈತ ದಂಪತಿ, ನಿಸರಾಣಿ ಗ್ರಾಮದ ಸುರೇಶ ಮತ್ತು ಭಾಗೀರಥಿ ಅವರಿಗೆ ತೀವ್ರ ಪೆಟ್ಟು ಬಿತ್ತು. ದಂಪತಿಯನ್ನು ಆಂಬುಲೆನ್ಸ್ನಲ್ಲಿ ಕರೆದೊಯ್ಯುತ್ತಿರುವಾಗ ಪ್ರತಿಭಟನಾನಿರತ ಮಹಿಳೆಯರು ಎರಡು ಗಂಟೆ ಕಾಲ ರಸ್ತೆಗೆ ಅಡ್ಡಲಾಗಿ ಕುಳಿತು ಪ್ರತಿಭಟಿಸಿದರು.
ಪೊಲೀಸರು ನಂತರ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.