ADVERTISEMENT

ದೇಶ ವಿಭಜಿಸುವ ಹುನ್ನಾರ: ಆತಂಕ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ದಾವಣಗೆರೆ: ಅಲ್ಪಸಂಖ್ಯಾತವಾದ ಈ ದೇಶಕ್ಕೆ ಕಪ್ಪುಚುಕ್ಕೆಯಾಗಿದೆ. ಸಾಚಾರ್ ಸಮಿತಿ, ರಂಗನಾಥ ಮಿಶ್ರಾ ಸಮಿತಿ ವರದಿ ಹಾಗೂ ನಿರ್ದೇಶಿತ ಮತೀಯ ಹಿಂಸಾಚಾರ ತಡೆ ಮಸೂದೆಗಳನ್ನು ಜಾರಿಗೆ ತರುವ ಮೂಲಕ ದೇಶವನ್ನು ವಿಭಜಿಸುವ ಹುನ್ನಾರ ನಡೆದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಸದಸ್ಯ ಇಂದ್ರೇಶ್ ಕುಮಾರ್ ಅಭಿಪ್ರಾಯಪಟ್ಟರು.

ಹಿಂದೂ ಜಾಗರಣ ವೇದಿಕೆ ರಾಜ್ಯ ಘಟಕದ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ, ವೇದಿಕೆಯ 25ನೇ ವರ್ಷಾಚರಣೆ-ಹಿಂದೂ ಸುರಕ್ಷಾ ಆಂದೋಲನ ಹಾಗೂ `ಹಿಂದುತ್ವಕ್ಕಾಗಿ ವಕೀಲರು~ ರಾಜ್ಯಮಟ್ಟದ ಸಮಾವೇಶ ಅಂಗವಾಗಿ ನಡೆದ, `ಸಾಚಾರ್ ಸಮಿತಿ, ರಂಗನಾಥ ಮಿಶ್ರಾ ಸಮಿತಿ ವರದಿ: ದೇಶಕ್ಕೆ ಮಾರಕ~ ವಿಷಯ ಕುರಿತ ಗೋಷ್ಠಿಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ದೇಶದ ಸಂವಿಧಾನ ರಚನೆ ಸಂದರ್ಭದಲ್ಲಿ ಧಾರ್ಮಿಕ ಅಲ್ಪಸಂಖ್ಯಾತವಾದದ ಬಗ್ಗೆ ಚರ್ಚೆ ನಡೆದಾಗ ಹಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೂ ಕೂಡಾ ಜಗತ್ತಿನ ಯಾವ ದೇಶದಲ್ಲೂ ಇಲ್ಲದ ಈ ವ್ಯವಸ್ಥೆ ನಮ್ಮಲ್ಲಿ ಜಾರಿಗೆ ಬಂದಿತು. ಮತಬ್ಯಾಂಕ್ ರಾಜಕಾರಣದ ಮೂಲಕ ನಿರ್ದಿಷ್ಟ ಕೋಮಿನವರನ್ನು ಓಲೈಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಶ್ಲೇಷಿಸಿದರು.

ಭಾರತೀಯ ಭೂಸೇನೆಯ ನಿವೃತ್ತ ಉಪ ಮಹಾದಂಡನಾಯಕ ವಿ.ಎಂ. ಪಾಟೀಲ್ ಮಾತನಾಡಿ, ಬ್ರಿಟಿಷರು ನಮ್ಮನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿದರು. 1947ರಿಂದ ಇದುವರೆಗೆ ನಮ್ಮನ್ನು ಆಳಿದ ರಾಜಕೀಯ ಪಕ್ಷವೂ ಅದೇ ನೀತಿಯನ್ನು ಪಾಲಿಸಿಕೊಂಡು ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದರು.

ನ್ಯಾಯಮೂರ್ತಿ ಚನ್ನವೀರಪ್ಪ, ಜಿ.ಟಿ. ಸುರೇಶ್, ಸತ್ಯಜೀತ್ ಸುರತ್ಕಲ್ ಭಾಗವಹಿಸಿದ್ದರು. ಡಿ.ಬಿ. ಬಸವರಾಜ್ ಸ್ವಾಗತಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.