ADVERTISEMENT

ಬಸವಕಲ್ಯಾಣ: ಮಾವು ದುಬಾರಿ

​ಪ್ರಜಾವಾಣಿ ವಾರ್ತೆ
Published 12 ಮೇ 2012, 19:30 IST
Last Updated 12 ಮೇ 2012, 19:30 IST

ಬಸವಕಲ್ಯಾಣ: ಈಗಾಗಲೇ ಮಾರುಕಟ್ಟೆಗೆ ಹಣ್ಣಿನ ರಾಜ ಮಾವಿನ ಪ್ರವೇಶವಾಗಿದೆ. ಆದರೆ ಈ ಸಲ ಗಿಡಗಳಿಗೆ ಭಾರ ಆಗುವಷ್ಟು ಹೂವುಗಳು ಬಿಟ್ಟು ಮಾವಿನ ಫಸಲು ಹೆಚ್ಚಿಗೆ ಬಂದರೂ ಬೆಲೆ ಮಾತ್ರ ಎಂದಿನಕ್ಕಿಂತ ಹೆಚ್ಚಾಗಿದೆ.

ಹೆಚ್ಚಿನವರು ಹೊಲಗಳಲ್ಲಿ ಮಾವಿನ ಗಿಡಗಳನ್ನು ಬೆಳೆಸಿರುತ್ತಾರೆ. ಆದ್ದರಿಂದ ಬೇಸಿಗೆಯಲ್ಲಿ ಈ ಹಣ್ಣು ಎಲ್ಲೆಡೆ ದೊರಕುತ್ತದೆ. ಆದರೆ ಈ ವರ್ಷ ಕಳೆದ ಕೆಲ ವರ್ಷಗಳಕ್ಕಿಂತ ಹೆಚ್ಚಿನ ಹೂವು ಬಿಟ್ಟಿದ್ದರಿಂದ ಹಣ್ಣುಗಳು ಸಹ ಸರಿಯಾಗಿ ಬೆಳೆದಿವೆ. ಆದರೆ ಕೆಲದಿನಗಳಿಂದ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಹಣ್ಣುಗಳ ಬೆಲೆ ಕೆಜಿಗೆ 50ರಿಂದ 60 ರೂಪಾಯಿಗಳಷ್ಟಾಗಿದೆ.

  ಆದ್ದರಿಂದ ಹಣ್ಣುಗಳನ್ನು ನೊಡಿ ಬಾಯಲ್ಲಿ ನೀರೂರಿದರೂ ಜೇಬು ತಡಕಾಡಿ ಗ್ರಾಹಕರು ಖಾಲಿ ಕೈಯಿಂದ ಹೋಗಬೇಕಾಗುತ್ತಿದೆ. ಈಗಾಗಲೇ ಲಾಲ್‌ಬಹಾರ್ ಮತ್ತು ಬೇನಿಶಾನ್ ತಳಿಯ ಹಣ್ಣುಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಕಲಮಿ ಹಾಗೂ ನೀಲಂ ಹಣ್ಣುಗಳು ಮಾರಾಟಕ್ಕೆ ಸಿದ್ಧವಾಗಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಉಪ್ಪಿನಕಾಯಿ ಹಾಕುವುದಕ್ಕಾಗಿ ಹಸಿರು ಮಾವಿನ ಹಣ್ಣುಗಳ ಮಾರಾಟವೂ ಭರದಿಂದ ಸಾಗಿದ್ದು ಅದರ ಬೆಲೆಯೂ ದುಬಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ಬೇರೆ ಯಾವುದೇ ಹಣ್ಣು ತಿನ್ನದಿದ್ದರೂ ಸಿಹಿ-ಸ್ವಾದಿಷ್ಟ ಮಾವಿನ ಹಣ್ಣನ್ನು ಎಲ್ಲ ತಿನ್ನುತ್ತಾರೆ.  ಒಮ್ಮೆವಾದರೂ ಮಾವಿನ ರಸದ ಜತೆ ಹೋಳಿಗೆ ಉಣ್ಣುವುದು ವಾಡಿಕೆಯಾಗಿದೆ. ಈ ಹಣ್ಣು ಆರೋಗ್ಯವರ್ಧಕ ಮತ್ತು ಶಕ್ತಿ ಹೆಚ್ಚಿಸುತ್ತದೆ. ಇದರಿಂದ ಬೇಡಿಕೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.