ADVERTISEMENT

ಬಾದಾಮಿ: ಸಂಭ್ರಮದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಬಾದಾಮಿ: ಬನದ ಹುಣ್ಣಿಮೆಯ ದಿನ ಸೋಮವಾರ ಸಂಧ್ಯಾಕಾಲ ಬನಶಂಕರಿಯಲ್ಲಿ ಬನದೇವಿಯ ರಥೋತ್ಸವವು ಸಹಸ್ರಾರು ಭಕ್ತರ ಉದ್ಘೋಷಗಳ ಮಧ್ಯೆ  ಸಡಗರ, ಸಂಭ್ರಮದಿಂದ ಜರುಗಿತು.

ನಿಸರ್ಗ ಸೌಂದರ್ಯದ ಪಶ್ಚಿಮ ದಿಗಂತದಲ್ಲಿ ಸೂರ್ಯನು ಭೂತಾಯಿ ಗರ್ಭವನ್ನು ಸೇರುತ್ತಿರುವಂತೆಯೇ ಬಾನಿನಲ್ಲಿ ಹೊಂಬಣ್ಣದ ಕಿರಣಗಳ ಗೋದೂಳಿ ಸಮಯದಲ್ಲಿ ವೇದಘೋಷ ಹಾಗೂ ವಾದ್ಯಗಳ ವೈಭವದಲ್ಲಿ ಆದಿಶಕ್ತಿದೇವತೆ ಬನದಬ್ಬೆ ಬನಶಂಕರಿ ದೇವಿಯ ರಥವನ್ನು ನೆರೆದ ಸಾವಿರಾರು ಭಕ್ತರು ಶ್ರದ್ಧೆ ಭಕ್ತಿಯಿಂದ ಆದಿಪರಮೇಶ್ವರಿ ಶಂಭೂಕೋ.. ಎನ್ನುತ್ತಾ ಎಳೆದು ಭಕ್ತಿ ಭಾವದಲ್ಲಿ ಮಿಂದರು.

ವಿವಿಧ ವರ್ಣದ ಧ್ವಜಗಳು, ಬಾಳೆಯ ಕಂಬಗಳು ಹಾಗೂ ಪುಷ್ಪಮಾಲೆಗಳಿಂದ ಶೃಂಗರಿಸಿದ್ದ ರಥದಲ್ಲಿ
ಅರ್ಚಕರು ಪಲ್ಲಕ್ಕಿಯಲ್ಲಿ ಹೊತ್ತು ತಂದ ಬನಶಂಕರಿದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದರು.

ಭಕ್ತರು ಉತ್ತತ್ತಿ, ಬಾಳೆಹಣ್ಣು ಮತ್ತು ಲಿಂಬೆಹಣ್ಣು ಅರ್ಪಿಸಿದರು. ರಥದ ಗಾಲಿಗೆ ತೆಂಗಿನಕಾಯಿ ಒಡೆದರು. ದೇವಿ ದರ್ಶನ ಪಡೆಯಲು ಬೆಳಿಗ್ಗೆಯಿಂದ ಸಂಜೆವರೆಗೂ ಸಾಲಿನಲ್ಲಿ ನಿಂತಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.