ಶಿವಮೊಗ್ಗ: ಮಲೆನಾಡಿನ ಪರಿಸರ ಸಂಪೂರ್ಣ ಹಾಳಾದ ಪರಿಣಾಮ ಇಲ್ಲಿಯ ತಾಪಮಾನ ಇಂದು ಏರುಗತಿಯಲ್ಲಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್. ಸದಾಶಿವಯ್ಯ ಕಳವಳ ವ್ಯಕ್ತಪಡಿಸಿದರು.
ನಗರಸಭೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರೋಟರಿ ಕ್ಲಬ್ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಸಂಯುಕ್ತವಾಗಿ ನಗರದ ಕುವೆಂಪು ರಂಗಮಂದಿರದಲ್ಲಿ ‘ಶಾಲೆಯಿಂದ ಮನೆಗೆ’ ಘೋಷಣೆಯಡಿ ಶನಿವಾರ ಏರ್ಪಡಿಸಿದ್ದ ‘ಪ್ಲಾಸ್ಟಿಕ್ ಜಾಗೃತಿ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇವಲ 20 ವರ್ಷಗಳ ಹಿಂದೆ ಇದ್ದ ಮಲೆನಾಡು ಈಗಿಲ್ಲ. ದಟ್ಟ ಕಾಡು ಕಣ್ಮರೆಯಾಗಿದೆ. ತಾಪಮಾನ ಶೇ. 12ರಷ್ಟು ಹೆಚ್ಚಾಗಿದೆ. 2050ಕ್ಕೆ ಇದು ಶೇ. 1.5 ಡಿಗ್ರಿ ಸೆಲ್ಸಿಯಸ್ ಜಾಸ್ತಿಯಾಗಲಿದೆ ಎಂದರು.
ಒಂದು ಕಾಲದಲ್ಲಿ ಗಂಧದ ಬೀಡಾಗಿದ್ದ ಮಲೆನಾಡಿನಲ್ಲಿ ಈಗ ಈ ಮರಗಳಿಲ್ಲ. ಇಲ್ಲಿನ ಪರಿಸರವನ್ನು ಸಮತೋಲನಗೊಳಿಸಲು ಶ್ರೀಗಂಧದ ಮರಗಳನ್ನು ಹೆಚ್ಚು ನೆಡಬೇಕು ಎಂದು ಸಲಹೆ ಮಾಡಿದರು. ಬೆಂಗಳೂರು ನಗರದಲ್ಲಿ 40 ಮೈಕ್ರಾನ್ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ನ್ನು ನಿಷೇಧಿಸಲಾಗಿದೆ. ಅದೇ ರೀತಿ, ಶಿವಮೊಗ್ಗ ನಗರದಲ್ಲೂ ನಗರಸಭೆ ತನ್ನ ಬೈಲಾದಲ್ಲಿ ಇದನ್ನು ಅಳವಡಿಸಿಕೊಂಡು ಅಧಿಸೂಚನೆ ಹೊರಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಶಾಸಕ ಕೆ.ಎಸ್. ಈಶ್ವರಪ್ಪ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಕೆ.ಎಸ್. ಗಂಗಾಧರಪ್ಪ, ಪ್ರೊ. ಎ.ಎಸ್. ಚಂದ್ರಶೇಖರ್, ಎಸ್.ಎನ್. ಚನ್ನಬಸಪ್ಪ, ಎಚ್.ಎಲ್. ರವಿ, ಸತ್ಯನಾರಾಯಣ, ಮೋಹನ ರೆಡ್ಡಿ, ಎ.ಟಿ. ಸುಬ್ಬೇಗೌಡ, ಟಿ.ಎನ್. ಕಮಲಾಕರ್, ರವೀಂದ್ರನಾಥ್ ಐತಾಳ್, ಭಾರತಿ ಚಂದ್ರಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಸನ್ನಕುಮಾರ್ ಸ್ವಾಗತಿಸಿದರು. ರೇಣುಕಾ ನಾಗರಾಜ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.