ADVERTISEMENT

ಮೀನುಗಾರರ ಪ್ರತಿಭಟನೆ: ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST
ಮೀನುಗಾರರ ಪ್ರತಿಭಟನೆ: ಮಾತಿನ ಚಕಮಕಿ
ಮೀನುಗಾರರ ಪ್ರತಿಭಟನೆ: ಮಾತಿನ ಚಕಮಕಿ   

ಬೇಲೂರು: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಮೀನುಗಾರರು ಬುಧವಾರ ಮೀನುಗಾರಿಕಾ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರಲ್ಲದೆ, ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.

ಮೈಸೂರಿನ ಮೀನುಗಾರರ ಮಹಾ ಮಂಡಳದ ವತಿಯಿಂದ ಹನುಮಂತನಗರದಲ್ಲಿನ ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಮೀನುಗಾರರಿಗೆ ಗುರುತಿನ ಪತ್ರ ನೀಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಸಭೆ ಕರೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮೀನುಗಾರರು ಸ್ಥಳಕ್ಕಾಗಮಿಸಿದ ಮೀನುಗಾರಿಕೆ ಇಲಾಖೆಯ ವಲಯ ನಿರ್ದೇಶಕ ಜಗದೀಶ್, ಜಿಲ್ಲಾ ಹಿರಿಯ ನಿರ್ದೇಶಕ ನಾಗರಾಜ್ ಮತ್ತು ಸಹಾಯಕ ನಿರ್ದೇಶಕ ಶಾಂತಿಪ್ರಿಯ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಮೀನುಗಾರರ ಮತ್ತೊಂದು ಗುಂಪಿನೊಂದಿಗೆ ಶಾಮೀಲಾಗಿ ತಮಗೆ  ಅನ್ಯಾಯ ಮಾಡುತ್ತಿದ್ದೀರಾ ಎಂದು ತರಾಟೆಗೆ ತಗೆದು ಕೊಂಡರು.

ನ್ಯಾಯ ಕೇಳಲು ಹೋದ ತಮ್ಮ ಮೇಲೆ ವಿನಾಕಾರಣ ಪೊಲೀಸರಿಗೆ ದೂರು ನೀಡಲಾಗುತ್ತಿದೆ. ಗಂಡಸರನ್ನು ಮನೆಯಿಂದ ಎಳೆದು  ಕೊಂಡು ಹೋಗಲಾಗುತ್ತಿದೆ. ಇದರಿಂದ ಹೆಂಗಸರು ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ತಮಗೆ ನ್ಯಾಯ ದೊರಕದಿದ್ದರೆ,  ಯಗಚಿ ಜಲಾಶಯಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದರು.

ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಚೆನ್ನಕೇಶವ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಕೆ.ಕುಮಾರ್, ಜಯಕರ್ನಾಟಕ ಸಂಘಟನೆಯ ಗೌರವಾಧ್ಯಕ್ಷ ಸುದರ್ಶನ್ ಮೀನುಗಾರರಿಗೆ ಬೆಂಬಲ ವ್ಯಕ್ತಪಡಿಸಿ ಮೀನುಗಾರರ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಲ್ಲಿ ಆಗ್ರಹಿಸಿದರು. ಏಪ್ರಿಲ್ 10ರೊಳಗೆ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.