ADVERTISEMENT

ಯಶವಂತಪುರ- ಮಿರಜ್ ರೈಲಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಬೆಳಗಾವಿ: `ಬೆಳಗಾವಿ- ಧಾರವಾಡ ನಡುವೆ ನೇರ ಸಂಪರ್ಕ ಕಲ್ಪಿಸುವ ಹೊಸ ರೈಲು ಮಾರ್ಗಕ್ಕೆ ಇಲಾಖೆ ಒಪ್ಪಿಗೆ ನೀಡಿದ್ದು ಪ್ರಸ್ತಾವವನ್ನು ಯೋಜನಾ ಆಯೋಗಕ್ಕೆ ಸಲ್ಲಿಸಲಾಗಿದೆ~ ಎಂದು ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ ಮಂಗಳವಾರ ಇಲ್ಲಿ ಹೇಳಿದರು.

ಮಿರಜ್- ಯಶವಂತಪುರ- ಮಿರಜ್ ಎಕ್ಸಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಬೆಳಗಾವಿ- ಧಾರವಾಡ ಹಾಗೂ ಬೆಳಗಾವಿ- ಕೊಲ್ಲಾಪುರ ಹೊಸ ರೈಲು ಮಾರ್ಗಕ್ಕೆ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದರು.

ದಾವಣಗೆರೆ- ತುಮಕೂರು ನಡುವೆ ನೇರ ಸಂಪರ್ಕ ಕಲ್ಪಿಸುವುದರಿಂದ ಈ ಭಾಗದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ನಾಲ್ಕು ಗಂಟೆಗಳ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಈ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಈ ಮಾರ್ಗದ ಕೆಲಸವನ್ನು ಆದ್ಯತೆ ಮೇಲೆ ತೆಗೆದುಕೊಳ್ಳಲಾಗುವುದು. ಕೊಲ್ಲಾಪುರ- ಬೆಳಗಾವಿ ಮಾರ್ಗದ ಸಮೀಕ್ಷೆಗೂ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.

ತುಮಕೂರು- ರಾಯದುರ್ಗ, ಕುಡಚಿ- ಬಾಗಲಕೋಟೆ, ವೈಟ್‌ಫೀಲ್ಡ್- ಕೋಲಾರ, ಶಿವಮೊಗ್ಗ- ಹರಿಹರ, ಕೋಲಾರ- ಚಿಕ್ಕಬಳ್ಳಾಪುರ, ಹಾಸನ- ಬೆಂಗಳೂರು ಹೊಸ ಮಾರ್ಗ ಹಾಗೂ ಜೋಡಿ ಮಾರ್ಗಗಳ ಯೋಜನೆಗಳನ್ನು ರೂ 6,000 ಕೋಟಿ  ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ರೂ 3,600 ಕೋಟಿ  ನೀಡಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ರೈಲ್ವೆ ಯೋಜನೆಗಳ ಜಾರಿಗೆ ಉತ್ಸುಕತೆ ತೋರಿದ್ದು, ತನ್ನ ಪಾಲಿನ ಹಣವನ್ನು ನೀಡಲು ಒಪ್ಪಿಗೆ ನೀಡಿದೆ. ದೇಶದಲ್ಲಿಯೇ ರೈಲ್ವೆ ಯೋಜನೆಗಳ ಜಾರಿಯಲ್ಲಿ ಕರ್ನಾಟಕ ಮಾದರಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ರೈಲ್ವೆ ಯೋಜನೆಗಳ ಜಾರಿ ಮತ್ತು ಹೆಚ್ಚು ರೈಲುಗಳ ಸೌಲಭ್ಯ ಕಲ್ಪಿಸಲು  ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುನಿಯಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.