ADVERTISEMENT

ರಾಗಿ, ಬತ್ತದ ಬೆಳೆಗೆ ಮಳೆ ಕಾಟ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2010, 9:50 IST
Last Updated 21 ಡಿಸೆಂಬರ್ 2010, 9:50 IST
ರಾಗಿ, ಬತ್ತದ ಬೆಳೆಗೆ ಮಳೆ ಕಾಟ
ರಾಗಿ, ಬತ್ತದ ಬೆಳೆಗೆ ಮಳೆ ಕಾಟ   

ಹಿರೀಸಾವೆ: ರೈತರ ಕನಸುಗಳಿಗೆ ಜೀವ ತುಂಬಿದ್ದ ರಾಗಿ ಬೆಳೆಯನ್ನು ಅಕಾಲಿಕ ಮಳೆ ಹಾಳು ಮಾಡಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ.
ಮೂರ್ನಾಲ್ಕು ತಿಂಗಳುಗಳ ಕಾಲ ಕಾಲ ಶ್ರಮದಿಂದ ಕೃಷಿ ಮಾಡಿದ್ದ ರೈತ, ಉತ್ತಮ ಫಸಲು ಬಂದುದ್ದನ್ನು ಕಂಡು ಸಂತೋಷಗೊಂಡಿದ್ದ. ಆದರೆ, ಅಕಾಲಿಕವಾಗಿ ಬಿದ್ದ ಮಳೆಯಿಂದ ರಾಗಿ ಮತ್ತು ಬತ್ತವನ್ನು ಮನೆಗೆ ತರಲಾಗದೆ ತೊಂದರೆ ಅನುಭವಿಸುವಂತಾಗಿದೆ.

ಒಂದು ವಾರದಿಂದ ಮಳೆಯಿಲ್ಲದ್ದನ್ನು ಕಂಡ ರೈತರು ರಾಗಿ ಮತ್ತು ಬತ್ತದ ಬೆಳೆ ಕಟಾವು ಮಾಡಿದ್ದರು. ಶೀಘ್ರದಲ್ಲಿಯೇ ಗುಡ್ಡೆ ಹಾಕುವ ಕೆಲಸ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಜಿಟಿಜಿಟಿ ಮಳೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಟಾವು ಮಾಡದಿರುವ ರಾಗಿ, ಬತ್ತದ ಫಸಲು ಮಳೆಯಿಂದ ನೆಲಕ್ಕೆ ಬಿದ್ದಿದೆ. ಅಲ್ಲಲ್ಲಿ ಫಸಲು ಉದುರಿಹೋಗುತ್ತಿದೆ.

ಜಿಟಿಜಿಟಿ ಮಳೆಯಲ್ಲಿ ನೆನೆದು ರಾಗಿ ಕರಗುತ್ತಿದೆ. ನೆಲದಲ್ಲಿ ಉದುರಿದ ರಾಗಿ ಮೊಳಕೆಯೊಡೆಯುತ್ತಿದೆ. ಫಸಲು ನೆನೆದು ಗೆದ್ದಲು ಹತ್ತುತ್ತಿದೆ. ನೆನೆದ ಹುಲ್ಲನ್ನು ಜಾನುವಾರುಗಳು ತಿನ್ನಲು ಆಗುವುದಿಲ್ಲ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ರಾಗಿ ಜೊತೆಯಲ್ಲಿ ಬೆಳೆದ ಅವರೆ ಮತ್ತು ಜೋಳಕ್ಕೂ ಮಳೆಯಿಂದ ತೊಂದರೆಯಾಗಿದೆ. ಚಳಿ ಹೆಚ್ಚಾದರೆ ಉತ್ತಮ ಅವರೆ ಬೆಳೆ ಬರುತ್ತಿತ್ತು. ಅಕಾಲಿಕ ಮಳೆಯಿಂದ ಚಳಿ ಕಡಿಮೆ ಆಗಿರುವುದರಿಂದ ಅವರೆ ಕಾಳು ಕಟ್ಟುವುದಿಲ್ಲ. ಇನ್ನು ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಿಂದ ಕೆಲಸಕ್ಕೆ ಜನರು ಸಿಗದೆ ಮನೆ ಮಂದಿಯೆಲ್ಲ ಕಟಾವು ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಮಳೆ ಎಲ್ಲವನ್ನೂ ಹಾಳುಗೆಡವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.