ADVERTISEMENT

ರಾಮ್‌ದೇವ್ ಬಂಧನ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ಬೀದರ್: ಭ್ರಷ್ಟಾಚಾರದ ವಿರುದ್ಧ ರಾಮ್‌ದೇವ್ ಬಾಬಾ ನೇತೃತ್ವದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದವರ ಮೇಲೆ ಲಾಠಿ ಪ್ರಹಾರ ನಡೆಸಿದ್ದನ್ನು ಖಂಡಿಸಿ ಪತಂಜಲಿ ಯೋಗ ಸಮಿತಿಯಿಂದ ನಗರದಲ್ಲಿ ಸೋಮವಾರ ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಮೌನ ಪ್ರತಿಭಟನೆ ನಡೆಸುವ ಮೂಲಕ ಕರಾಳ ದಿನ ಆಚರಿಸಲಾಯಿತು.

ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ನೂರಾರು ಜನ ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ಭ್ರಷ್ಟಾಚಾರ ಹಾಗೂ ವಿದೇಶಗಳಲ್ಲಿ ಕೂಡಿಟ್ಟಿರುವ ಕಪ್ಪು ಹಣ ಮರಳಿ  ತರುವಂತೆ ಆಗ್ರಹಿಸಿ ಉಪವಾಸ ನಡೆಸುತ್ತಿದ್ದ ಸಾವಿರಾರು ಜನರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿ ಅಮಾನವೀಯ ರೀತಿಯಲ್ಲಿ ನಡೆದುಕೊಳ್ಳಲಾಗಿದೆ ಎಂದು ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರದಲ್ಲಿ ದೂರಿದ್ದಾರೆ.

ರಾಮ್‌ದೇವ್ ಬಾಬಾ ಅವರನ್ನು ಬಂಧಿಸಿ 9 ಗಂಟೆಗಳ ಕಾಲ ದೇಶಕ್ಕೆ ಗೊತ್ತಾಗದಂತೆ ಇಡಲಾಗಿತ್ತು. ಬಾಬಾ ಅವರನ್ನು ಕೊಲೆ ಮಾಡುವ ಕೇಂದ್ರ ಸರ್ಕಾರದ ಷಡ್ಯಂತ್ರ ಇದಾಗಿದೆ ಎಂದು ಆಪಾದಿಸಿದ್ದಾರೆ.
ವಕೀಲರು ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪ್ರಮುಖರಾದ ಜ್ಯೋತಿರ್ಮಯಾನಂದ ಸ್ವಾಮಿ, ಎನ್.ಡಿ. ರಾಮತೇರೆ, ಸುರೇಶ್ಚಂದ್ರ ಸಿಂಧೆ, ಈಶ್ವರಸಿಂಗ್ ಠಾಕೂರ್, ಚನ್ನಬಸಪ್ಪ ಹಾಲಹಳ್ಳಿ ಚಂದ್ರಶೇಖರ ಗಾದಾ, ರೇವಣಸಿದ್ಧಪ್ಪ ಜಲಾದೆ, ವಿಜಯಕುಮಾರ ಪಾಟೀಲ್ ಗಾದಗಿ, ಶಶಿ ಹೊಸಳ್ಳಿ, ಶಕುಂತಲಾ ಬೆಲ್ದಾಳೆ, ಡಾ. ಕಲಾವತಿ ಪಾಟೀಲ್ ಮೊದಲಾದವರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.