ADVERTISEMENT

ರಾಯಚೂರು: ಎತ್ತುಗಳ ಭಾರ ಎಳೆಯುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2011, 19:00 IST
Last Updated 18 ಏಪ್ರಿಲ್ 2011, 19:00 IST
ರಾಯಚೂರು: ಎತ್ತುಗಳ ಭಾರ ಎಳೆಯುವ ಸ್ಪರ್ಧೆ
ರಾಯಚೂರು: ಎತ್ತುಗಳ ಭಾರ ಎಳೆಯುವ ಸ್ಪರ್ಧೆ   

ರಾಯಚೂರು: ಇಲ್ಲಿನ ಗದ್ವಾಲ್ ರಸ್ತೆಯಲ್ಲಿರುವ ಶ್ರೀವೀರಾಂಜನೇಯ ಜಾತ್ರಾಮಹೋತ್ಸವದ ಅಂಗವಾಗಿ ವೀರಾಂಜನೇಯ ಭಜನಾ ಮಂಡಳಿ ಹಾಗೂ ಮುನ್ನೂರು ಕಾಪು ಸಮಾಜದ ವತಿಯಿಂದ ಎತ್ತುಗಳು ಕಲ್ಲಿನ ಭಾರ ಎಳೆಯುವ ಸ್ಪರ್ಧೆಯನ್ನು ಸೋಮವಾರ ಆಯೋಜಿಸಲಾಗಿತ್ತು.

ಎತ್ತುಗಳು ಭಾರ ಎಳೆಯುವ ಸ್ಪರ್ಧೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರರೆಡ್ಡಿ ಚಾಲನೆ ನೀಡಿದರು. ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರ ಎತ್ತುಗಳು 20 ನಿಮಿಷಗಳಲ್ಲಿ 2 ಟನ್ ಭಾರದ ಕಲ್ಲನ್ನು 2303 ಅಡಿಗಳಷ್ಟು ಎಳೆದು ಪ್ರಥಮ ಸ್ಥಾನದೊಂದಿಗೆ 15ತೊಲೆ ಬೆಳ್ಳಿ ಪದಕ ಪಡೆದುಕೊಂಡವು. ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದ ಶೇಖರಪ್ಪ ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 2 ಟನ್ ಭಾರದ ಕಲ್ಲನ್ನು 2,250 ಅಡಿಗಳಷ್ಟು ಎಳೆಯುವುದರ ಮೂಲಕ ದ್ವಿತೀಯ ಸ್ಥಾನ ಗಳಿಸಿ 10 ತೊಲೆ ಬೆಳ್ಳಿ ಪದಕ ಪಡೆದವು. ರಾಯಚೂರು ತಾಲ್ಲೂಕಿನ ಗಣಮೂರು ಗ್ರಾಮದ ಪ್ರವೀಣಕುಮಾರ ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 2 ಟನ್ ಭಾರದ ಕಲ್ಲನ್ನು 2100ಅಡಿಗಳಷ್ಟು ಎಳೆದು ತೃತೀಯ ಸ್ಥಾನ ಪಡೆಯವುದರ ಮೂಲಕ 5 ತೊಲೆ ಬೆಳ್ಳಿ ಪದಕವನ್ನು ಪಡೆದುಕೊಂಡವು.

ಸ್ಪರ್ಧೆಯ ನೇತೃತ್ವವನ್ನು ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ದೊಡ್ಡ ಮಲ್ಲೇಶಪ್ಪ ಹಾಗೂ ನಗರಸಭೆ ಸದಸ್ಯ ಟಿ.ಶ್ರೀನಿವಾಸರೆಡ್ಡಿ ವಹಿಸಿಕೊಂಡಿದ್ದರು.ಮಾಜಿ ಶಾಸಕ ಎ.ಪಾಪಾರೆಡ್ಡಿ, ಮುನ್ನೂರುಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಸವರಾಜರೆಡ್ಡಿ, ಸಮಾಜದ ಮುಖಂಡರಾದ ಯು.ಹೇಮರೆಡ್ಡಿ, ಪುಂಡ್ಲ ನರಸರೆಡ್ಡಿ, ಎಸ್.ವೆಂಕಟರೆಡ್ಡಿ, ಕೇದಾರ ತಿಮ್ಮಾರೆಡ್ಡಿ,ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ತಿಮ್ಮಾರೆಡ್ಡಿ, ನಗರಸಭೆ ಸದಸ್ಯರಾದ ಎನ್.ಶ್ರೀನಿವಾಸರೆಡ್ಡಿ, ಟಿ.ಮಲ್ಲೇಶ, ಕೆ.ನಲ್ಲಾರೆಡ್ಡಿ ಹಾಗೂ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.