ಶ್ರೀನಿವಾಸಪುರ: ಈಗ ಚೆಂಡು ಹೂವಿಗೆ ಬೆಲೆ ಕುಸಿತದ ಬಿಸಿ ತಟ್ಟಿದೆ. ಚೆಂಡು ಹೂವನ್ನು ಬೆಳೆದಿರುವ ರೈತರು ಹಾಕಿದ ಬಂಡವಾಳವೂ ಬರದೆ ಪರಿತಪಿಸುತ್ತಿದ್ದಾರೆ.
ತಾಲ್ಲೂಕಿನಲ್ಲಿ ಕೊಳವೆ ಬಾವಿಗಳ ಆಶ್ರಯದಲ್ಲಿ ಚೆಂಡು ಹೂವನ್ನು ಬೆಳೆಯಲಾಗಿದೆ. ಬಣ್ಣಗಳ ತಯಾರಿಕೆ ಮತ್ತು ಅಲಂಕಾರಕ್ಕಾಗಿ ಈ ಹೂವನ್ನು ಬೆಳೆಯಲಾಗುತ್ತದೆ. ಹಬ್ಬ ಹರಿದಿನಗಳ ಕಾಲದಲ್ಲಿ ಈ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ಇರುತ್ತಿತ್ತು. ಆದರೆ ಈಗ ಹೂವಿಗೆ ತೃಪ್ತಿಕರವಾದ ಬೆಲೆ ಸಿಗುತ್ತಿಲ್ಲ.
ಸ್ಥಳೀಯ ಮಾರುಕಟ್ಟೆಗಳಲ್ಲಿ ಕೆ.ಜಿ.ಗೆ ರೂ. 12ರಿಂದ 13ರಂತೆ ಮಾರಾಟವಾಗುತ್ತಿದೆ. ಹೂವನ್ನು ಕೀಳುವ ಕೂಲಿ, ಗೋಣಿ ಚೀಲ, ಸಾಗಾಣೆ ವೆಚ್ಚ, ಕಮೀಷನ್ ಮತ್ತು ತೋಟಕ್ಕೆ ಹಾಕಿರುವ ಬಂಡವಾಳ ಲೆಕ್ಕ ಹಾಕಿದರೆ ಏನೂ ಗಿಟ್ಟುವುದಿಲ್ಲ ಎಂದು ಪಾಳ್ಯ ಗ್ರಾಮದ ರೈತ ಪಿ.ಎಂ. ವೆಂಕಟೇಶರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಳೆಗಾರರಿಗೆ ಬೆಳೆಗೆ ಹಾಕಿದ ಬಂಡವಾಳವೂ ಸಿಗುತ್ತಿಲ್ಲ. ಆದರೆ ಮಧ್ಯವರ್ತಿಗಳು ಲಾಭ ಮಾಡಿ ಕೊಳ್ಳುತ್ತಿದ್ದಾರೆ.ರೈತರಿಂದ ಖರೀದಿಸಿದ ಮೇಲೆ ಅವರು ತಮ್ಮದೇ ಆದ ಬೆಲೆ ಇಟ್ಟು ಮಾರಾಟ ಮಾಡುತ್ತಾರೆ. ಉಳಿದ ಕೃಷಿ ಉತ್ಪನ್ನಗಳ ಪಾಡೂ ಇದೆ ಆಗಿದೆ ಎಂದು ಹೇಳಿದರು.
ಈ ಮಧ್ಯೆ ತರಕಾರಿಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆದರೂ ಇಳಿಕೆಯ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಸಂತೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಹಿಂದಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬುದು ಗ್ರಾಹಕರ ಅಳಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.