ADVERTISEMENT

ವಿದ್ಯಾರ್ಥಿ ಆತ್ಮಹತ್ಯೆ: ಶಿಕ್ಷಕಿ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST
ಕಡೂರು ಪಟ್ಟಣದ ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿ ವಿಶ್ವಾಸ್ ಆತ್ಮಹತ್ಯೆಗೆ ಶಾಲೆಯ ಮುಖ್ಯ ಶಿಕ್ಷಕಿಯೇ ಕಾರಣ ಎಂದು ಆರೋಪಿಸಿ ಪೋಷಕರು, ಸಂಬಂಧಿಕರು ಶಿಕ್ಷಕಿಯ ಬಂಧಿನಕ್ಕೆ ಒತ್ತಾಯಿಸಿ ಶಾಲೆಯ ಮುಂದೆ ಗುರುವಾರ ಪ್ರತಿಭಟಿಸಿದರು. ಒಳಚಿತ್ರದಲ್ಲಿ ಮೃತ ವಿದ್ಯಾರ್ಥಿಯನ್ನು ಕಾಣಬಹುದು
ಕಡೂರು ಪಟ್ಟಣದ ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿ ವಿಶ್ವಾಸ್ ಆತ್ಮಹತ್ಯೆಗೆ ಶಾಲೆಯ ಮುಖ್ಯ ಶಿಕ್ಷಕಿಯೇ ಕಾರಣ ಎಂದು ಆರೋಪಿಸಿ ಪೋಷಕರು, ಸಂಬಂಧಿಕರು ಶಿಕ್ಷಕಿಯ ಬಂಧಿನಕ್ಕೆ ಒತ್ತಾಯಿಸಿ ಶಾಲೆಯ ಮುಂದೆ ಗುರುವಾರ ಪ್ರತಿಭಟಿಸಿದರು. ಒಳಚಿತ್ರದಲ್ಲಿ ಮೃತ ವಿದ್ಯಾರ್ಥಿಯನ್ನು ಕಾಣಬಹುದು   

ಕಡೂರು: ಪಟ್ಟಣದ ಜ್ಞಾನ ಭಾರತಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ವಿಶ್ವಾಸ್ ಬುಧವಾರ ಮನೆಯಲ್ಲಿ ನೇಣಿಗೆ ಶರಣಾಗಲು ಮುಖ್ಯ ಶಿಕ್ಷಕಿ ನಂದಿನಿ ಪಿ.ಶಿರಹಟ್ಟಿ ನಿಂದಿಸಿರುವುದೇ ಕಾರಣ ಎಂದು ಆರೋಪಿಸಿ ಪೋಷಕರು, ಸಂಬಂಧಿಕರು ಹಾಗೂ ಸಾರ್ವಜನಿಕರು ಶಿಕ್ಷಕಿಯ ಬಂಧಿನಕ್ಕೆ ಒತ್ತಾಯಿಸಿ  ಶಾಲೆಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಶಾಲೆಯಿಂದ ಹೊರ ಹಾಕಿದ್ದರಿಂದ ಎರಡು ದಿನಗಳಿಂದ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿದ್ದಾನೆ ಎಂದು ವಿಶ್ವಾಸ್‌ನ ತಂದೆ ನಿಂಗಾಚಾರ್ ಆರೋಪಿಸಿದರು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಪೋಷಕರು ಗುರುವಾರ ಶಾಲೆಯ ಮುಂದೆ ಜಮಾಯಿಸಿ ಶಿಕ್ಷಕಿಯನ್ನು ಬಂಧಿಸಬೇಕು, ಕೂಡಲೇ ಶಾಲೆಯಿಂದ ಹೊರಹಾಕಬೇಕೆಂದು ಆಗ್ರಹಿಸಿ ಶಾಲೆಯ ಕಚೇರಿಗೆ ನುಗ್ಗಲು ಯತ್ನಿಸಿದರು. ಆದರೆ ಪ್ರತಿಭಟನಕಾರರನ್ನು ಪೊಲೀಸರು ನಿಯಂತ್ರಿಸಿದರು.

ಶಾಲೆಯ ಆಡಳಿತ ಮಂಡಳಿ ಮಾಡಿದ ಸಂಧಾನ ಪ್ರಕ್ರಿಯೆಗೆ ಬೆಲೆ ನೀಡದ ಪೋಷಕರು, ಸಂಬಂಧಿಕರು ಶಿಕ್ಷಕಿಯನ್ನು ಹೊರಗಡೆ ಕರೆ ತನ್ನಿ ಎಂದು ಕೂಗಾಡಿ ನುಗ್ಗಲು ಯತ್ನಿಸಿದಾಗ ಅನಿವಾರ್ಯವಾಗಿ ವೃತ್ತ ನಿರೀಕ್ಷಕ ಬಾಲಚಂದ್ರೇಗೌಡ ಅವರು ಶಿಕ್ಷಕಿಯನ್ನು ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ದರು. ಇದನ್ನು ಕಂಡ ಪ್ರತಿಭಟನಾಕಾರರು ಮೃತನ ಅಂತ್ಯಸಂಸ್ಕಾರಕ್ಕೆ ತೆರಳಿದರು.

ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ ಸ್ವಾಮಿ, ಶಿಕ್ಷಕಿಯ ಅನುಚಿತ ವರ್ತನೆಯನ್ನು ಖಂಡಿಸಿದರು. ಈ ಶಿಕ್ಷಕಿಯ ಮೇಲೆ ಈಗಾಗಲೇ ಹತ್ತಾರು ದೂರುಗಳು ಬಂದಿದ್ದು, ಆಡಳಿತ ಮಂಡಳಿ ಕೂಡಲೇ ಶಿಕ್ಷಕಿಯ ಮೇಲೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ತಡೆಯಬೇಕೆಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.