ಧಾರವಾಡ: ಅಣಸಿ-ದಾಂಡೇಲಿ ರಕ್ಷಿತಾರಣ್ಯ ವ್ಯಾಪ್ತಿಯ ಗುಂದ ಗ್ರಾಮದ ಬಳಿಯ ಕಾನೇರಿ ನದಿಯಲ್ಲಿ ಈಜಲು ಹೋದ ಧಾರವಾಡ ತಾಲ್ಲೂಕಿನ ಪುಡಕಲಕಟ್ಟಿ ಗ್ರಾಮದ ಯುವಕನೊಬ್ಬ ನೀರು ಪಾಲಾದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದ್ದು, ಮೃತದೇಹ ಮಂಗಳವಾರ ಘಟನೆ ನಡೆದ ಸ್ಥಳದಿಂದ 70 ಮೀಟರ್ ದೂರದಲ್ಲಿ ದೊರೆತಿದೆ.
ಧಾರವಾಡ ತಾಲ್ಲೂಕಿನ ಬೇಲೂರು ಕೈಗಾರಿಕಾ ಪ್ರದೇಶದ ಕಾರ್ಖಾನೆಯ 15 ಯುವಕರು ಭಾನುವಾರ ದಾಂಡೇಲಿ ಅರಣ್ಯಕ್ಕೆ ಪಿಕ್ನಿಕ್ಗೆ ತೆರಳಿದ್ದರು. ಅವರಲ್ಲಿ ಗ್ರಾಮದ ಚಂದ್ರಗೌಡ ತಮ್ಮನಗೌಡ ದೊಡ್ಡಗೌಡ (26) ಎಂಬಾತ ಸುಮಾರು 30 ಅಡಿ ಆಳವಿದ್ದ ನೀರಿನಲ್ಲಿ ಮುಳುಗಿದ.
ಸಾಕಷ್ಟು ಶೋಧ ಕಾರ್ಯ ನಡೆಸಿದರೂ ಮಂಗಳವಾರ ಬೆಳಗಿನವರೆಗೂ ಶವ ದೊರೆತಿರಲಿಲ್ಲ. 48 ಗಂಟೆಗಳ ಬಳಿಕ ಶವ ನೀರಿನ ಮೇಲ್ಭಾಗಕ್ಕೆ ಬಂದಿತು ಎಂದು ದಾಂಡೇಲಿ ಇನ್ಸ್ಪೆಕ್ಟರ್ ಕೆ.ಸಿ.ಪುರುಷೋತ್ತಮ `ಪ್ರಜಾವಾಣಿ~ಗೆ ತಿಳಿಸಿದರು.ಉಳಿದ 14 ಯುವಕರು ಸುರಕ್ಷಿತವಾಗಿದ್ದು, ಧಾರವಾಡ ನಗರ ಹಾಗೂ ಸಮೀಪದ ಗ್ರಾಮಗಳಿಗೆ ಸೇರಿದವರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.