ಮಂಡ್ಯ: ನಗರದ ಪೊಲೀಸ್ ಕಾಲೊನಿಯಲ್ಲಿರುವ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಾಮುಂಡೇಶ್ವರಿ ರಥೋತ್ಸವ ವೈಭವಯುತವಾಗಿ ನಡೆಯಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೂ ದೇವಾಲಯದಲ್ಲಿ ಹಲವು ಧಾರ್ಮಿಕ ಚಟುವಟಿಕೆಗಳು ನಡೆದವು. ಬೆಳಿಗ್ಗೆಯಿಂದ ಸುಪ್ರಭಾತ ಸೇವೆ, ಶುದ್ಧಿ ಪುಣ್ಯಾಹ, ಪಂಚಾಮೃತ ಅಭಿಷೇಕ, ರಥಾಂಗಹೋಮ, ಮಹಾಪೂರ್ಣಾಹುತಿ ಸೇರಿ ವಿವಿಧ ಪೂಜಾ ಕಾರ್ಯಗಳು ನಡೆದವು. ಭಕ್ತರು ಪೂಜೆ ಸಲ್ಲಿಸಲು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಭಾನುವಾರ ರಜಾ ದಿನವಾದ್ದರಿಂದ ಅಪಾರ ಜನರು ಜಾತ್ರೆಯಲ್ಲಿ ಪಾಲ್ಗೊಂಡರು. 11 ಗಂಟೆಯಲ್ಲಿ ಎರಡು ಸಾವಿರ ಭಕ್ತರ ಸಮ್ಮುಖದಲ್ಲಿ ಚಾಮುಂಡೇಶ್ವರಿ ದೇವಿಯ ವಾರ್ಷಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಸ್ಥಾನ ಆವರಣದಿಂದ ಬನ್ನೂರು ಮುಖ್ಯ ರಸ್ತೆಯಲ್ಲಿ ಸಾಗಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ತಲುಪಿ ಅಲ್ಲಿಂದ ಪೊಲೀಸ್ ವಸತಿ ಗೃಹಗಳ ಮಾರ್ಗವಾಗಿ ದೇವಾಲಯದ ಆವರಣಕ್ಕೆ ರಥ ಚಲಿಸಿತು. ಅಷ್ಟಾವಧಾನ ಸೇವೆ, ಮಂತ್ರಪುಷ್ಪ, ಅಷ್ಟೋತ್ತರ ಸೇವೆ, ಮಹಾಮಂಗಳಾರತಿ, ಮಹಾ ನೈವೇದ್ಯ ಸೇವೆಗಳನ್ನು ಮಾಡಲಾಯಿತು. ನಂತರ ನೆರೆದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು ಎಂದು ದೇವಸ್ಥಾನದ ಅರ್ಚಕ ವೆಂಕಟಾಚಲಪತಿ ಹೇಳಿದರು.
‘ಜನರು ತಾವು ಕೆಲಸದಲ್ಲಿ ಮುಳುಗಿ ಏಕತಾನತೆಯಿಂದ ಜಡಗಟ್ಟಿ ಹೋಗಿರುತ್ತಾರೆ. ಬಿಡುವಿಲ್ಲದೆ ದುಡಿಯುವ ಮನಸ್ಸಿಗೆ ವಿಶ್ರಾಂತಿ ಪಡೆಯುವುದಕ್ಕಾಗಿ ನಮ್ಮ ಪೂರ್ವಜರು ಹಬ್ಬ ಹರಿದಿನಗಳು, ರಥೋತ್ಸವ ಹಾಗೂ ಜಾತ್ರೆಗಳನ್ನು ನಡೆಸುತ್ತಾ ಬಂದಿದ್ದಾರೆ. ಅದನ್ನು ಬಳುವಳಿಯಾಗಿ ಪಡೆದುಕೊಂಡು ಮುಂದುವರಿಸಿಕೊಂಡು ಹೋಗಬೇಕು. ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಸೇರಲು ರಥೋತ್ಸವ ಹಬ್ಬ ಹರಿದಿನಗಳು ಅವಕಾಶ ನೀಡುತ್ತವೆ. ಕುಟುಂಬ ಸದಸ್ಯರ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ’ ಎಂದು ಚಾಮುಂಡೇಶ್ವರಿ ನಗರದ ಮಹಿಳೆ ವಿದ್ಯಾಶ್ರೀ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.