ADVERTISEMENT

ಸಮಾನ ವೇತನಕ್ಕೆ ಪ್ರೌಢಶಾಲಾ ಸಹ ಶಿಕ್ಷಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST

ಚಿತ್ರದುರ್ಗ: ಪ್ರೌಢಶಾಲಾ ಸಹಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಶನಿವಾರ ಧರಣಿ ನಡೆಸಲಾಯಿತು.ನಗರದ ಒನಕೆ ಓಬವ್ವ ವೃತ್ತದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ಜಗದೀಶ್, ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ. ದೊಡ್ಡಯ್ಯ, ಪ್ರಧಾನ ಕಾರ್ಯದರ್ಶಿ ಎ.ಎಚ್. ಈರಣ್ಣ, ಖಜಾಂಚಿ ಓ.ಬಿ. ಬಸವರಾಜು, ಸಂಘಟನಾ ಕಾರ್ಯದರ್ಶಿ ನೀಲಕಂಠಾಚಾರ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರೌಢಶಾಲಾ ಸಹ ಶಿಕ್ಷಕರಿಗೆ 8,825ರಿಂದ 16 ಸಾವಿರ ರೂವರೆಗೆ ವೇತನ ನೀಡಲಾಗುತ್ತಿದೆ.ಆದರೆ, ಸಹಶಿಕ್ಷಕರಷ್ಟೇ ತತ್ಸಮಾನರಾದ ಪೊಲೀಸ್ ನಿರೀಕ್ಷಕರು ಹಾಗೂ ತಾಂತ್ರಿಕ ಕಾಲೇಜಿನ ಉಪನ್ಯಾಸಕರಿಗೆ 11,400 ರಿಂದ 21,600 ರೂ ವೇತನ ನೀಡಲಾಗುತ್ತಿದೆ.ಆದ್ದರಿಂದ ಸಹಶಿಕ್ಷಕರಿಗೂ ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಅನುದಾನಿತ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೂ ವೈದ್ಯಕೀಯ ಭತ್ಯೆ, ಕಾಲಮಿತಿ ಬಡ್ತಿ, ಎಲ್.ಆರ್. ವೈದ್ಯನಾಥನ್ ವರದಿ ಜಾರಿಗೆ ತರಬೇಕು. ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಪದ್ಧತಿಯ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ದರ, ಪರೀಕ್ಷಾ ದರ ದಿನಭತ್ಯೆಗಳನ್ನು ಪದವಿ ಕಾಲೇಜಿನ ಉಪನ್ಯಾಸಕರಿಗೆ ತತ್ಸಮಾನವಾಗಿ ನೀಡಬೇಕು,ಶಿಕ್ಷಣ ಸಂಯೋಜಕ ಹುದ್ದೆಯನ್ನು ವಿಷಯ ಪರೀಕ್ಷಕರ ಹುದ್ದೆಗಳಾಗಿ ಪರಿವರ್ತಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.