ADVERTISEMENT

ಸಾರ್ವಜನಿಕ ಬ್ಯಾಂಕ್ ಖಾಸಗೀಕರಣ ಸಲ್ಲ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಚಿತ್ರದುರ್ಗ: ನಗರದ ಕೆನರಾ ಬ್ಯಾಂಕ್ ಮುಂದೆ ಗುರುವಾರ ನೌಕರರು 43ನೇ ಬ್ಯಾಂಕ್‌ಗಳ ರಾಷ್ಟ್ರೀಕರಣ ದಿನ ಆಚರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಬ್ಯಾಂಕ್‌ಗಳ ಪರ ಮತ್ತು ಸರ್ಕಾರದ ಜನವಿರೋಧಿ ನೀತಿ ಖಂಡಿಸುವ ಘೋಷಣೆಗಳನ್ನು ಹಾಕಿದರು.

1969ರಲ್ಲಿ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಕೈಗೊಂಡು ದೇಶದ ಆರ್ಥಿಕ ಅಭಿವೃದ್ಧಿ ಬೆಳವಣಿಗೆಗೆ ಅಡಿಪಾಯ ಹಾಕಿತು. ಉಳ್ಳವರ ಸ್ವತ್ತಾಗಿದ್ದ ಬ್ಯಾಂಕ್‌ಗಳ ಸೇವೆ ಜನಸಾಮಾನ್ಯರಿಗೆ ತಲುಪುವಂತಾಯಿತು ಎಂದು ನೌಕರರ ಮುಖಂಡರು ನುಡಿದರು.

1969ರಲ್ಲಿ 8,268 ಶಾಖೆಗಳಲ್ಲಿ 4,665 ಕೋಟಿ ರೂ ಠೇವಣಿ ಸಂಗ್ರಹವಾಗಿತ್ತು. ಆದರೆ, 2012ರ ಜೂನ್‌ಗೆ 77 ಸಾವಿರ ಶಾಖೆಗಳಲ್ಲಿ ರೂ 59 ಲಕ್ಷ ಕೋಟಿ ಠೇವಣಿ ಸಂಗ್ರಹವಾಗಿದೆ. ಇದು ರಾಷ್ಟ್ರೀಕರಣದ ಮಹತ್ವ ತಿಳಿಸುತ್ತದೆ.
ಆದರೆ, ಬಂಡವಾಳಶಾಹಿಗಳ ಹಿಡಿತದಿಂದಾಗಿ ಕೈಗಾರಿಕೋದ್ಯಮಿಗಳಿಗೆ, ಶ್ರೀಮಂತರಿಗೆ ನೀಡಿರುವ ಸಾಲ ಮರುಪಾವತಿಯಾಗದೇ ನಷ್ಟ ಅನುಭವಿಸುವಂತಾಗಿದೆ. 2012ರ ಮಾರ್ಚ್‌ಗೆ ಬ್ಯಾಂಕ್‌ಗಳ ಅನುತ್ಪಾದಕ ಸಾಲ ರೂ1.20 ಲಕ್ಷ ಕೋಟಿಗೆ ತಲುಪಿದೆ. ಸರ್ಕಾರದ ಹೊಸ ಆರ್ಥಿಕ ನೀತಿಗಳು ಸಾರ್ವಜನಿಕ ಬ್ಯಾಂಕ್‌ಗಳಿಗೆ ಮಾರಕವಾಗಿ ಪರಿಣಮಿಸಿವೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಶ್ವನಾಥ್ ಶಿವಶಂಕರಶೆಟ್ಟಿ, ಡಿ. ಗಂಗಾಧರಪ್ಪ, ಎಂ. ಸತ್ಯನಾರಾಯಣ ಕಿಣಿ, ಗಿರೀಶ್, ಎಂ.ಜಿ.ಎಂ. ಪಾಷಾ, ಶಿವಪ್ಪ, ಸತೀಶ್, ಶೇಖ್‌ಇಮಾಮ್, ತಿಪ್ಪೇಸ್ವಾಮಿ, ಜಿ.ಆರ್. ಖಾನ್, ಗಂಗಾಧರಪ್ಪ, ರೇಖಾನಂದ, ಪದ್ಮರಾಜ್, ನಿಖಿಲ್, ವಿವೇಕ್, ಜಗನ್ನಾಥ್, ಪರ್ವೀನ್ ತಾಜ್, ಗೀತಾ, ಸುಜಾತಾ, ಮಂಜುಳಾ, ಪಾರ್ವತಮ್ಮ, ಪಾಲಮ್ಮ, ವಿಜಯಮ್ಮ, ಲಕ್ಷ್ಮೀದೇವಿ, ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.