ADVERTISEMENT

ಸೋಮಸಾಗರ: ಕುಡಿಯುವ ನೀರಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

ಕನಕಗಿರಿ: ಇಲ್ಲಿಗೆ ಸಮೀಪದ ಸೋಮಸಾಗರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಹಲವಾರು ತಿಂಗಳುಗಳಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರೂ ಅಧಿಕಾರಿಗಳು ಈ ಕಡೆಗೆ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಮೂರು ನೀರಿನ ಕಿರು ತೊಟ್ಟಿಗಳು ಇದ್ದರೂ ಉಪಯೋಗವಿಲ್ಲದಂತಾಗಿದೆ.

ನೀರಿಗಾಗಿ ದೂರದ ಬಾಳಪ್ಪ ತರ‌್ಲಕಟ್ಟಿ, ಪಂಪಾಪತಿ ಹೊಸಮನಿ, ಹನುಮಪ್ಪ ಕರಡಿ ಅವರ ಪಂಪ್‌ಸೆಟ್‌ಗಳಿಗೆ ತೆರಳಿ ನೀರು ತರುತ್ತಿದ್ದೇವೆ ಎಂದು ಯಮನಮ್ಮ ತಳವಾರ, ಲಕ್ಷ್ಮಣ ಬಸರಿಹಾಳ ತಿಳಿಸಿದರು.ವಿದ್ಯುತ್ ಸಹ ಸಮರ್ಪಕವಾಗಿ ಪೂರೈಕೆಯಾಗುವುದಿಲ್ಲ, ವಿದ್ಯುತ್ ಇದ್ದರೆ ಮಾತ್ರ ನೀರು ಎನ್ನುವಂತಾಗಿದೆ. ತಮ್ಮ ಬೆಳೆಗಳಿಗೆ ನೀರು ಸಾಲುವುದಿಲ್ಲ ಎಂಬ ಕಾರಣಕ್ಕೆ ಪಂಪ್‌ಸೆಟ್‌ಗಳ ಮಾಲೀಕರು ಸಹ ಜನರಿಗೆ ಕುಡಿಯುವ ನೀರು ಕೊಡುತ್ತಿಲ್ಲ ಎಂದು ಕುಂಟೆಪ್ಪ ವಂಕಲಕುಂಟಿ, ಲಕ್ಷ್ಮಣ ಬಸರಿಹಾಳ ತಿಳಿಸಿದರು.

ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿಕೊಂಡರೆ ಅವರೂ ಸ್ಪಂದಿಸುತ್ತಿಲ್ಲ ಎಂದು ವಂಕಲಕುಂಟಿ ದೂರಿದರು.
ಅಡವಿಬಾವಿ ಗ್ರಾಮದ ರಸ್ತೆಯಲ್ಲಿ ಕೊಳವೆಬಾವಿ ಕೊರೆದಿದ್ದರೂ ಮೋಟಾರ್ ಇಳಿಸಿಲ್ಲ, ವಿದ್ಯುತ್ ವ್ಯವಸ್ಥೆ ಮಾಡಿಸಿಲ್ಲ. ಚುನಾವಣೆ ದಿವಸ ಹೊಲ, ತೋಟದಲ್ಲಿ ಕೆಲಸ ಮಾಡುತ್ತಿದ್ದರೂ ಅಲ್ಲಿಗೆ ವಾಹನ ಕಳಿಸಿ ಮತ ಗಿಟ್ಟಿಸಿಕೊಳ್ಳುವ ಸ್ಥಳೀಯ ಮುಖಂಡರು `ಕ್ಯಾರೆ' ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.