ಹೊಸಪೇಟೆ: ಹೈದರಾಬಾದ್ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಜನರು ಆತಂಕಗೊಂಡಿದ್ದಾರೆ.
ಜಲಾಶಯದ ನೀರು ನಿರಂತರ ನಾಲ್ಕು ವರ್ಷಗಳಿಂದ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ವರದಿಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಹಾಗೂ ಜಿಲ್ಲಾಡಳಿತ ವಿಫಲವಾದ ಹಿನ್ನೆಲೆಯಲ್ಲಿ ಜನರು ಕಳವಳಕ್ಕೀಡಾಗಿದ್ದಾರೆ.
ರಾಜ್ಯದ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಜತೆಗೆ ಆಂಧ್ರಪ್ರದೇಶದ ಕರ್ನೂಲ, ಕಡಪ ಮತ್ತು ಅನಂತಪುರ ಜಿಲ್ಲೆಗಳ ಜನರು ಈ ಜಲಾಶಯದ ಮೇಲೆ ಅವಲಂಬಿತರಾಗಿದ್ದಾರೆ.
ತುಂಗಭದ್ರಾ ಜಲಾಶಯದ ನೀರು ಶುದ್ಧೀಕರಿಸದೆ ಕುಡಿಯಲು ಯೋಗ್ಯವಲ್ಲ ಎಂದು ಈಗಾಗಲೇ ತಿಳಿಸಿದ್ದರೂ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ಮುಂದಾಗುತ್ತ್ಲ್ಲಿಲ. ನೀರಿಗೆ ತ್ಯಾಜ್ಯ ಸೇರುತ್ತಿರುವುದು ಹಸಿರು ಬಣ್ಣಕ್ಕೆ ತಿರುಗಲು ಕಾರಣ ಎಂದು ಹೇಳಲಾಗುತ್ತಿದೆ. ಹಸಿರು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಅಧಿಕಾರಿಗಳು ಮುಂದಾಗಿಲ್ಲ.
`ಜಲಾಶಯದ ಮೇಲ್ಭಾಗದಲ್ಲಿ ತಲೆ ಎತ್ತಿರುವ ಕಾರ್ಖಾನೆಗಳ ತ್ಯಾಜ್ಯ ಸೇರುತ್ತಿರಬಹುದು ಎಂಬ ಅನುಮಾನ ಒಂದೆಡೆಯಾದರೆ, ಹರಿದು ಬಂದ ಹೊಸ ನೀರು ಮೇಲ್ಭಾಗದ ಹೊಲಗದ್ದೆಗಳ ಮೂಲಕ ಬರುವುದರಿಂದ ರೈತರು ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದು ಸಹ ಮತ್ತೊಂದು ಕಾರಣ ಇರಬಹುದು.
ಅಲ್ಲದೆ ಮೋಡ ಕವಿದ ವಾತಾವರಣ ದಿಢೀರ್ ಬಿಸಿಲು ಬೀಳುವುದರಿಂದ ಪಾಚಿ ವೃದ್ಧಿಯಾಗಿ ಹೊರಹೊಮ್ಮುವುದರಿಂದ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದ ಮೀನುಗಳು ಸಾಯುವ ಸಂಭವ ಇದೆ. ನಿಖರ ಕಾರಣ ಕಂಡುಹಿಡಿಯಲು ಅಧ್ಯಯನ ಮಾಡಿಸಬೇಕು ಎಂದು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಪರಿಸರ ತಜ್ಞ ಸಮದ್ ಕೊಟ್ಟೂರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.