ADVERTISEMENT

ಹುಳಿಯಾರು ಪಟ್ಟಣ: ಅವನತಿಯತ್ತ ಬಾಲವನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST
ಹುಳಿಯಾರು ಪಟ್ಟಣ: ಅವನತಿಯತ್ತ ಬಾಲವನ
ಹುಳಿಯಾರು ಪಟ್ಟಣ: ಅವನತಿಯತ್ತ ಬಾಲವನ   

ಹುಳಿಯಾರು: ಬೆಳೆದು ನಿಂತ ದೊಡ್ಡ ದೊಡ್ಡ ಪೊದೆಗಳು, ತುಕ್ಕು ಹಿಡಿದು ಹಾಳಾಗಿರುವ ಮಕ್ಕಳ ಜೋಕಾಲಿಗಳು, ಕುಳಿತುಕೊಳ್ಳಲು ಯೋಗ್ಯವಲ್ಲದ ಸಿಮೆಂಟ್ ಬೆಂಚ್‌ಗಳು...

 ಇದು ಪಟ್ಟಣದ ಹೃದಯ ಭಾಗದಲ್ಲಿರುವ ಮಕ್ಕಳ ಉದ್ಯಾನವನ ಹೀನಾಯ ಸ್ಥಿತಿ. ಬಿ.ಎಚ್.ರಸ್ತೆ ನಾಡಕಚೇರಿ ಪಕ್ಕದಲ್ಲಿ 12 ವರ್ಷಗಳ ಹಿಂದೆ ಮಕ್ಕಳ ಮನರಂಜನೆ, ಆಟಕ್ಕೆಂದು ನಿರ್ಮಿಸಲಾಗಿದೆ. ಉದ್ಯಾನವನಕ್ಕೆ ಮಕ್ಕಳು ಹೋಗಿ ಆಟವಾಡುವುದು ಇರಲಿ, ಎಲ್ಲಿ ವಿಷ ಜಂತುಗಳ ಕಡಿತಕ್ಕೆ ಅಥವಾ ಮತ್ತಾವುದೋ ಅನಾಹುತಕ್ಕೀಡಾಗುತ್ತರೊ ಎಂಬ ಆತಂಕದಿಂದಾಗಿ ಮಕ್ಕಳನ್ನೆ ಅದರೊಳಗೆ ಹೋಗದಂತೆ ಕಾಯುವ ಸ್ಥಿತಿ ಪೋಷಕರಿಗೆ ಎದುರಾಗಿದೆ.

 ಪಟ್ಟಣದಲ್ಲಿ 1 ಎಕರೆ 38 ಗುಂಟೆ ಜಮೀನನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಪಡೆದು ಮಕ್ಕಳ ಉದ್ಯಾನವನ ನಿರ್ಮಾಣ ಮಾಡಿಲಾಗಿದೆ. ಈಗಾಗಲೇ ನಾಡಕಚೇರಿ, ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ ಒತ್ತುವರಿ ಮಾಡಲಾಗಿದೆ.

ಉದ್ಯಾನವನದ ಸುತ್ತ ಹಾಕಲಾಗಿದ್ದ ಮುಳ್ಳುತಂತಿ ಕಿತ್ತು ಹೋಗಿ, ಒಳಗೆಲ್ಲ ಪೊದೆಗಳು ಬೆಳೆದಿವೆ. ಮಕ್ಕಳ ಆಟಕ್ಕೆಂದು ನಿರ್ಮಿಸಿರುವ ಜಾರು ಬಂಡಿ, ಜೋಕಾಲಿಗಳು ಹಾಳಾಗಿವೆ. ಒಟ್ಟಾರೆ ಉದ್ಯಾನವನ `ಅಧ್ವಾನವನ~ವಾಗಿ ಹೋಗಿದೆ. ಉದ್ಯಾನವನ ನಿರ್ಮಾಣವಾಯಿತೇ ಹೊರೆತು ಉದ್ಘಾಟನೆಯೇ ಆಗಲಿಲ್ಲ ಎಂದು ಜನ ದೂರುತ್ತಾರೆ.

 ಉದ್ಯಾನವನವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ವಶಕ್ಕೆ ತೆಗೆದುಕೊಂಡು ಅಭಿವೃದ್ಧಿ ಪಡಿಸಿದರೆ ಪಟ್ಟಣಕ್ಕಿರುವ ಏಕೈಕ ಉದ್ಯಾನವನ ಉಳಿಯುತ್ತದೆ. ಮಕ್ಕಳ ಆಟಕ್ಕೆ ಅನುಕೂಲ ಕಲ್ಪಿಸಲು ಇರುವ ಉದ್ಯಾನವನ್ನು ರಕ್ಷಿಸಿ, ಉಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.