ADVERTISEMENT

ಇಳಕಲ್ ಸಂಘಟನೆಗಳ ಧರಣಿ ಅಂತ್ಯ:ಹೆಸ್ಕಾಂ ಅಧಿಕಾರಿಯಿಂದ ಸಮಸ್ಯೆ ಪರಿಹಾರದ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 7:25 IST
Last Updated 19 ಅಕ್ಟೋಬರ್ 2012, 7:25 IST

ಇಳಕಲ್:  ಹೆಸ್ಕಾಂ ಅವ್ಯವಸ್ಥೆ ಖಂಡಿಸಿ ಇಳಕಲ್ ಹೆಸ್ಕಾಂ ಕಚೇರಿ ಮುಂದೆ ವಿದ್ಯುತ್ ಬಳಕೆದಾರರ ವೇದಿಕೆ, ವಿದ್ಯುತ್ ಗುತ್ತಿಗೆದಾರರ ಸಂಘ, ವಿವಿಧ  ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರು ಎರಡು ದಿನ ನಡೆಸಿದ ಧರಣಿ  ಗುರುವಾರ ಅಂತ್ಯಗೊಂಡಿತು.

ಪ್ರತಿಭಟನಾಕಾರರಿಂದ ಮನವಿಪತ್ರ ಸ್ವೀಕರಿಸಿದ ಬಾಗಲಕೋಟೆ ವಲಯ ಅಧೀಕ್ಷಕ ಪಿ.ಎನ್. ನಾಗರಾಜ,  ತರಕಾರಿ ಮಾರುಕಟ್ಟೆಯಲ್ಲಿನ  ಬಿಲ್ ಸ್ವೀಕೃತಿ ಕೇಂದ್ರವನ್ನು ಇಂದಿನಿಂದಲೇ ಆರಂಭಿಸಲವಾಗುವುದು. ರೈತರ ಹೊಸ ಪಂಪ್‌ಸೆಟ್‌ಗಳಿಗೆ 15 ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ರೈತರಿಗೆ ಇನ್ನು ಒಂದು ವಾರದೊಳಗೆ ಹಗಲು 6 ತಾಸು ಪಂಪಸೆಟ್‌ಗಳಿಗೆ  ಸಮರ್ಪಕ ವಿದ್ಯುತ್ ಪೂರೈಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಪವರ ಲೂಮ್ ನೇಕಾರರಿಗೆ ಹಾಗೂ ಗ್ಯಾರೇಜ್ ಉದ್ಯೋಗಸ್ಥರಿಗೆ ಎಂ.ಆರ್.ಟಿ. ವಿಭಾಗದ ಎ.ಇ.ಇ. ಆರ್.ಎಂ. ಕೋಳಿ  ಹಣ ಪಡೆಯುತ್ತಿರುವ ಹಾಗೂ ಕಿರುಕುಳ ನೀಡುತ್ತಿರುವುದಾಗಿ ದೂರುಗಳು ಬಂದಿವೆ.  ಹಣ ನೀಡಿದವರು ಲಿಖಿತವಾಗಿ  ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ಗ್ಯಾರೇಜುಗಳ ಎಲ್.ಟಿ-5 ನ್ನು ಎಲ್.ಟಿ-3 ಆಗಿ ಪರಿವರ್ತಿಸಿದ್ದರೆ ಅಂತವುಗಳನ್ನು ರದ್ದು ಪಡಿಸಿ ಅವುಗಳ ಮೇಲೆ ವಿಧಿಸಿರುವ ದಂಡವನ್ನು ಮರುಪಾವತಿ ಮಾಡಲಾಗುವುದು. ಗ್ರಾಹಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಅಧಿಕಾರಿ ಎನ್.ಎ. ಮಾಹುರಕರ ಅವರನ್ನು 2 ದಿನಗಳಲ್ಲಿ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಗ್ರಾನೈಟ್ ಉದ್ದಿಮೆಗಳ ವಿದ್ಯುತ್ ಬಿಲ್ಲುಗಳನ್ನು ನಿಗದಿತ ಅವಧಿಯೊಳಗೆ ತಲುಪಿಸಬೇಕು, ಹುನಗುಂದ ಮತ್ತು ಇಳಕಲ್ಲ ನಗರಗಳ ಕೈಗಾರಿಕೆ ಘಟಕಗಳಿಗೆ ಕೂಡಲೇ ಪ್ರತ್ಯೇಕ ಫೀಡರ್ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಸಿ. ಚಂದ್ರಾಪಟ್ಟಣ,  ಬಿ.ಎಸ್.ಆರ್. ಕಾಂಗ್ರೆಸ್ ಮುಖಂಡ ಎಂ.ಎಸ್.ಪಾಟೀಲ, ನೇಕಾರ ಸಮುದಾಯಗಳ ಒಕ್ಕೂಟ ಅಧ್ಯಕ್ಷ ಲಕ್ಷ್ಮಣ ಗುರಂ, ಉಪಾಧ್ಯಕ್ಷ ಪಂಪಣ್ಣ ಕಾಳಗಿ, ರಕ್ಷಣಾ ವೇದಿಕೆ ಅಧ್ಯಕ್ಷ ಮಹಾಂತೇಶ ಅಂಗಡಿ, ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಶಿಕಾತ ಬಂಡರಗಲ್ಲ, ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಣ್ಣ ತುಂಬದ, ಗುರು ಗಾಣಗೇರ, ಮಹಾಲಿಂಗಪ್ಪ ಆವಾರಿ, ಕೆಪಿಸಿಸಿ ಸದಸ್ಯ ವಿಜಯಾನಂದ ಕಾಶಪ್ಪನವರ, ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ, ಜಿ.ಪಂ. ಸದಸ್ಯ ಮಹಾಂತೇಶ ನರಗುಂದ, ವಿಶ್ವನಾಥ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.