ರಬಕವಿ ಬನಹಟ್ಟಿ: ವಿದ್ಯುತ್ ಮಗ್ಗ ನೇಕಾರ ಜೋಡಣಿದಾರರ ಕೂಲಿ ಹೆಚ್ಚಳಗೊಳಿಸುವಂತೆ ಆಗ್ರಹಿಸಿ ನೇಕಾರ ಜೋಡಣಿದಾರರು ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.
ಬೆಳಿಗ್ಗೆ ನಗರದ ಕಾಡಸಿದ್ಧೇಶ್ವರ ದೇಗುಲದಿಂದ ಆರಂಭವಾದ ಪ್ರತಿಭಟನೆ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಮಾಲೀಕರ ಸಂಘದ ಕಾರ್ಯಾಲಯದವರೆಗೆ ನಡೆಯಿತು. ನೂರಾರು ನೇಕಾರರು ಮಾಲೀಕರ ಸಂಘದ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಕಾಡಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡರು, ‘ನಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಹಮ್ಮಿಕೊಂಡಿದೆ. ನೇಕಾರರ ಸಮಸ್ಯೆ ಇತ್ಯರ್ಥವಾಗಬೇಕು’ ಎಂದರು.
ನೇಕಾರರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಒಂದು ಸೀರೆಗೆ ₹ 15 ಹೆಚ್ಚು ಕೂಲಿ ನೀಡುವಂತೆ ಕೋರಿದೆವು. ಆದರೆ ಈ ಒಂದು ಪ್ರಸ್ತಾಪಕ್ಕೆ ಮಾಲೀಕರು ಸಂಘವು ಒಪ್ಪಿಗೆ ಸೂಚಿಸಿಲ್ಲ. ಆದ್ದರಿಂದ ನಾವು ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ನೇಕಾರ ಮುಖಂಡರು ತಿಳಿಸಿದರು. ‘ಮುಂಬರುವ ಸೋಮವಾರ ಮಾಲೀಕರ ಸಂಘದ ಸರ್ವ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯಕ್ಕೆ ಬರುವುದಾಗಿ ಮಾಲೀಕರ ಸಂಘದ ಅಧ್ಯಕ್ಷ ಶಂಕರ ಜಾಲಿಗಿಡದ ತಿಳಿಸಿದರು. ಇದಕ್ಕೆ ನೇಕಾರರು ಒಪ್ಪಿಗೆ ಸೂಚಿಸಿದರು.
ಮುಖಂಡರಾದ ಬಸವರಾಜ ಮುರಗೋಡ, ಶಿವನಿಂಗ ಟಿರಕಿ, ಶಿವಾನಂದ ಭಾವಿಕಟ್ಟಿ, ಕುಬೇರ ಸಾರವಾಡ, ಸುರೇಶ ಮಠದ, ಕುಮಾರ ಬೀಳಗಿ, ಪ್ರಹ್ಲಾದ ಭಸ್ಮೆ, ಮಹಾದೇವ ನುಚ್ಚಿ, ದೇವೇಂದ್ರ ಶೀಲವಂತ ಹಾಜರಿದ್ದರು.
ಸ್ಥಳೀಯ ಸಿಪಿಐ ಬಿ.ಎಸ್.ಮಂಟೂರ, ಪಿಎಸ್ಐ ಎಸ್.ಎಂ.ಆವಗಿ ಮತ್ತು ತೇರದಾಳ ಪಿಎಸ್ಐ ಗುರುನಾಥ ಚೌವಾಣ ಸೂಕ್ತ ಬಂದೊಬಸ್ತ್ ಅನ್ನು ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.