ರಬಕವಿ ಬನಹಟ್ಟಿ: ‘ಬೆಳೆದ ಬೆಳೆ ದನ ಕರುಗಳಿಗೆ ಹಾಕುವಂಗ ಆಗೇತ್ರಿ. 10 ರೂಪಾಯಿಗೆ ಐದು ಕಟ್ಟು ಸೊಪ್ಪು ಕೊಡುತ್ತಿದ್ದೇವೆ. ಆದರೆ ಮಂದಿ ಐದು ರೂಪಾಯಿಗೆ ಮೂರು ಕಟ್ಟು ಕೇಳುತ್ತಿದ್ದಾರೆ. ಆಲಕನೂರಿನಿಂದ ಇಲ್ಲಿಗೆ ಬಂದ ಪೆಟ್ರೊಲ್ ಖರ್ಚ ಕೂಡಾ ಬರಾಂಗಿಲ್ಲ’ ಎಂದು ರಾಯಬಾಗದಿಂದ ಮೆಂತೆ ಸೊಪ್ಪು ತಂದಿದ್ದ ರವಿ ಪೂಜಾರಿ ತಮ್ಮ ಅಳಲು ತೋಡಿಕೊಂಡರು.
‘ಈಗ ಒಂದು ರೂಪಾಯಿಗೆ ಏನೂ ಬರುವುದಿಲ್ಲ. ಆದರೆ ಬನಹಟ್ಟಿ ಮಾರುಕಟ್ಟೆಯಲ್ಲಿ ರೈತರು ಸದ್ಯ ಕೊತ್ತಂಬರಿ, ಮೆಂತೆ ಸೊಪ್ಪನ್ನು ಕೇವಲ ಒಂದು ರೂಪಾಯಿಗೆ ಕಟ್ಟು ಮಾರಾಟ ಮಾಡುತ್ತಿದ್ದಾರೆ. ಶನಿವಾರ ಮಾರುಕಟ್ಟೆಗೆ ಭೇಟಿ ನೀಡಿದಾಗ ಮಾರುಕಟ್ಟೆಯಲ್ಲಿ ಎಲ್ಲೆಲ್ಲೂ ಸೊಪ್ಪಿನ ರಾಶಿಯೇ ಕಾಣಿಸಿತು.
ಒಂದು ಎಕರೆ ಕೊತ್ತಂಬರಿ ಸೊಪ್ಪನ್ನು ಬೆಳೆಯಲು 5ರಿಂದ 6 ಸಾವಿರದವರೆಗೆ ಖರ್ಚಾಗುತ್ತದೆ. ಆದರೆ ಈಗ ಇಲ್ಲಿ ಕೇವಲ ಒಂದು ರೂಪಾಯಿಗೆ ಒಂದು ಕಟ್ಟು ಕೂಡಾ ಯಾರು ಕೇಳುತ್ತಿಲ್ಲ. ಕೊತ್ತಂಬರಿ ಬೆಳೆದ ಖರ್ಚು ಬಂದರೆ ಸಾಕು’ ಎಂದು ರೈತರಾದ ಯಲ್ಲಪ್ಪ ಬಣಾಜ, ಲಕ್ಷ್ಮಣ ಜಾಲಿಕಟ್ಟಿ, ಶಂಕರ ಮಲಾಬದಿ, ಪ್ರಕಾಶ ದೊಡ್ಡಪ್ಪಗೋಳ, ಮಹಾಂತೇಶ ಜಾಲಿಕಟ್ಟಿ, ಸಂಜೀವ ಕಾಡದೇವರ ತಿಳಿಸಿದರು.
ಐದಾರು ದಿನಗಳಿಂದ ಮಾರುಕಟ್ಟೆಗೆ ಮೆಂತೆ ಮತ್ತು ಕೊತ್ತಂಬರಿ ಸೊಪ್ಪು ಬೇಡಿಕೆಗಿಂತ ಹೆಚ್ಚು ಆವಕಗೊಳ್ಳುತ್ತಿದೆ. ಕೊಳ್ಳುವವರೇ ಇಲ್ಲದಂತಾಗಿದೆ ಎಂದು ತರಕಾರಿ ವ್ಯಾಪಾರಸ್ಥ ಸುರೇಶ ಬಾಳಿಕಾಯಿ ಹೇಳಿದರು.ವಿಶ್ವಜ ಕಾಡದೇವರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.