ಕಲಾದಗಿ: ಸಮೀಪದ ಐತಿಹಾಸಿಕ ಧಾರ್ಮಿಕ ಕ್ಷೇತ್ರ ತುಳಸಿಗೇರಿಯ ಮಾರುತೇಶ್ವರ ದೇವಸ್ಥಾನದಲ್ಲಿ ಕಾರ್ತೀಕೋತ್ಸವದ ನಿಮಿತ್ತ ಪಂಚಾಮೃತ ಅಭಿಷೇಕ, ಅಲಂಕಾರ ವಿವಿಧ ಪೂಜಾ ವಿಧಾನಗಳು ಹಾಗೂ ಕಳಸಾ ರೋಹಣ ಕಾರ್ಯಕ್ರಮ ನಡೆಯಿತು.
ಆಂಜನೇಯನಿಗೆ ವಿಶೇಷ ನೈವೇದ್ಯ, ಬಾಣದ ಗಡಿಗೆ, ಸಜ್ಜಿ ರೊಟ್ಟಿ, ಚವಳಿ ಕಾಯಿ ಪಲ್ಲೆ, ಹುಗ್ಗಿಯನ್ನು ಹರಕೆ ಹೊತ್ತ ಭಕ್ತರು ಗೋಪಾಲು ತುಂಬಿಸಿ ನಂತರ ದೇವರ ದರ್ಶನವನ್ನು ಪಡೆದುಕೊಂಡರು.
ಜಿಲ್ಲಾಡಳಿತ ಭಕ್ತರಿಗೆ ಹಾಗೂ ಅಂಗಡಿಕಾರರಿಗೆ ಯಾವುದೇ ತೊಂದರೆಯಾಗದಂತೆ ವಿಶಾಲವಾದ ಸ್ಥಳಾವಕಾಶ ಒದಗಿಸಿತ್ತು. ಜಾತ್ರೆಗೆ ಬಂದ ಭಕ್ತರಿಗೆ ಉತ್ತಮ ನೀರಿನ ವ್ಯವಸ್ಥೆ, ದರ್ಶನ ಪಡೆಯಲು ಸರದಿಯಲ್ಲಿ ನಿಲ್ಲಲು ಬ್ಯಾರಿಕೇಡ್ ನಿರ್ಮಾಣ, ವಾಹನ ಸವಾರರಿಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಶನಿವಾರ ಸಂಜೆ ಚಕ್ಕಡಿಗಳು, ಟಂಟಂ ಹಾಗೂ ಟ್ಯಾಕ್ಟರ್ಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುವುದು ಕಂಡುಬಂದಿತು. ಭಾನುವಾರ ಜಾತ್ರೆಯ ಸಂಭ್ರಮ ಹೆಚ್ಚಳವಾಗಲಿದೆ.
ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೂಬಸ್ತ್ ಒದಗಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.