ADVERTISEMENT

ದಿಕ್ಕುದಿಸೆಯಿಲ್ಲದೇ ಅನಾಥವಾದ ಕಲಾಕೃತಿ

ಪ್ರಜಾವಾಣಿ ವಿಶೇಷ
Published 3 ಡಿಸೆಂಬರ್ 2012, 8:16 IST
Last Updated 3 ಡಿಸೆಂಬರ್ 2012, 8:16 IST

 ಬಾಗಲಕೋಟೆ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಕಚೇರಿ ಪ್ರವೇಶದ್ವಾರದ ಬಳಿ ಪ್ರತಿಷ್ಠಾಪಿಸಲಾಗಿದ್ದ ಚಕ್ಕಡಿ ಮತ್ತು  ರೈತನ ಕುಟುಂಬದ ಸುಂದರವಾದ ಕಲಾಕೃತಿಗಳು ದಿಕ್ಕುದಿಸೆಯಿಲ್ಲದೇ ಅನಾಥವಾಗಿ ಬಿದ್ದಿವೆ.

ಕಳೆದ ಒಂದೂವರೆ ತಿಂಗಳಿಂದ ಎಪಿಎಂಸಿ ಕಚೇರಿ ಮುಂದೆ ಇರುವ  ಕಲಾಕೃತಿಗಳನ್ನು ದುರಸ್ತಿ ಹಿನ್ನೆಲೆಯಲ್ಲಿ ತೆಗೆದು ಬಿಸಾಡಲಾಗಿದೆ.

ಚಕ್ಕಡಿ ಮೇಲೆ ಕುಳಿತ ರೈತ, ಆತನ ಮಡದಿ ಮತ್ತು ಮಕ್ಕಳು ಇರುವ ಕಲಾಕೃತಿಗಳು ಅಲ್ಲಲ್ಲಿ ಭಗ್ನವಾಗಿರುವುದರಿಂದ ಅವುಗಳನ್ನು ಕೆಳಗೆ ಇಳಿಸಿ ಆವರಣದಲ್ಲಿ ಇಡಲಾಗಿದೆ ಎಂದು ಹೇಳಲಾಗು ತ್ತಿದೆ. ಆದರೆ, ಕಲಾಕೃತಿಗಳನ್ನು ಯಾರೋ ಕಿಡಿಗೇಡಿಗಳು ಭಗ್ನ ಮಾಡಿ ಎಸೆದಿರುವಂತೆ ಕಾಣುತ್ತಿವೆ.

ರೈತನ ಮೂರ್ತಿ ತಲೆಕೆಳಕಾಗಿ ಅಂಗಾತ ಬಿದ್ದರೆ ಚಕ್ಕಡಿ ಹಿಂದೆ ರೈತನ ಮಡದಿ ಮಗಳು ಕೈ ಮುರಿದ ಸ್ಥಿತಿಯಲ್ಲಿ ಕುಳಿತಿವೆ, ರೈತನ ಇನ್ನೊಂದು ಮಗು ಅಂಗಾತ ಬಿದ್ದರೆ ಒಂದು ಕಡೆ ನೀರಿನ ತತ್ರಾಣಿ, ಬುತ್ತಿಗಂಟು ಮತ್ತೊಂದು ಮೂಲೆಯಲ್ಲಿ ಬಿದ್ದಿವೆ.

ಈ ಸಂಬಂಧ  `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಎಪಿಎಂಸಿ ಕಾರ್ಯದರ್ಶಿ ಶ್ರಿಹರಿ,  ಸುಮಾರು 10 ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದ್ದ ರೈತನ ಚಕ್ಕಡಿ ಮತ್ತು ರೈತ ಕುಟುಂಬದ ಮೂರ್ತಿ ಗಳು ಸ್ವಲ್ಪ ದುರಸ್ತಿಯಾಗಿದ್ದರಿಂದ ಅವುಗಳನ್ನು ಕೆಳಗೆ ಇಡಲಾಗಿದೆ ಎಂದು ತಿಳಿಸಿದರು.

ರೈತನ ಚಕ್ಕಡಿ, ನೊಗ,ಚಕ್ರಗಳು  ಮಳೆ ಹಾಗೂ ಬಿಸಿಲಿನಿಂದ ದುರಸ್ಥಿಗೆ ಬಂದಿದ್ದು, ಅಷ್ಟೇ ಅಲ್ಲದೇ ಮೂರ್ತಿಗಳ ಕೈ, ಕಾಲು, ಮುಖ ಸ್ವಲ್ಪ ಭಗ್ನವಾಗಿರುವುದರಿಂದ ಮೂರ್ತಿ ಸಿದ್ಧಪಡಿಸು ವವರು ಸಿಗದ್ದರಿಂದ ದುರಸ್ತಿ ಕಾರ್ಯ ವಿಳಂಬವಾಗಿದೆ ಎಂದು ತಿಳಿಸಿದರು. ಈ ಮೂರ್ತಿಗಳಿಗೆ ಬಣ್ಣವನ್ನು ಹಚ್ಚುವ ಮೂಲಕ ಮೊದಲಿನರತಹ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.