ADVERTISEMENT

ದೈತ್ಯ ವಾಹನ ರಾಯಚೂರು ತಲುಪಲು ಬೇಕು ಆರು ತಿಂಗಳು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 9:02 IST
Last Updated 15 ಡಿಸೆಂಬರ್ 2012, 9:02 IST

ಅಮೀನಗಡ: ಭಾರಿ ವಾಹನವೊಂದು ಹಾದು ಹೋಗಲು ಅಮೀನಗಡ ಸಮೀಪ ಕಮತಗಿ-ರಾಮಥಾಳ ಮಾರ್ಗದಲ್ಲಿ  ಮಲಪ್ರಭಾ ನದಿಯಲ್ಲಿ ಪ್ರತ್ಯೇಕ ಸೇತುವೆ ನಿರ್ಮಾಣ ಮಾಡಲಾಗಿದೆ.

ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಸುಮಾರು 35ರಿಂದ 40 ವರ್ಷಗಳಷ್ಟು ಹಳೆಯದ್ದಾಗಿದೆ. 400ಟನ್ ಭಾರವಿರುವ ವಾಹನ ಹಾದು ಹೋದರೆ ಸೇತುವೆ ಕುಸಿದು ಬೀಳಬಹುದು ಎಂಬ   ಆತಂಕದಿಂದ ನದಿಯಲ್ಲಿ ಲಕ್ಷಾಂತರ ರೂಪಾಯಿ  ವೆಚ್ಚಮಾಡಿ  `ತಾತ್ಕಾಲಿಕ ಸೇತುವೆ' ನಿರ್ಮಿಸಿ ಈ ಬೃಹತ್ ವಾಹನ ಸಾಗಿಸಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಇಂದೋ ನಾಳೆ ಬೃಹತ್ ವಾಹನ ಹಾದುಹೋಗಲಿದೆ.

ದೈತ್ಯ ವಾಹನ: ರಾಯಚೂರು ಜಿಲ್ಲೆಯ ಶಕ್ತಿನಗರದ ವಿದ್ಯುತ್ ಘಟಕಕ್ಕೆ  400 ಟನ್ ತೂಕದ ಬೃಹತ್ ಯಂತ್ರವನ್ನು ಹೊತ್ತು ಸಾಗಿರುವ ದೈತ್ಯ ಲಾರಿಗೆ ಬರೋಬ್ಬರಿ 230 ಚಕ್ರಗಳಿವೆ. ಈ ವಾಹನಕ್ಕೆ ವೋಲ್ವೊ ಕಂಪೆನಿಯ ಮೂರು ಎಂಜಿನ್ ಜೋಡಿಸಲಾಗಿದೆ.

`ಜಪಾನ'ದಿಂದ ಹಡಗಿನಲ್ಲಿ ಮುಂಬೈಗೆ ನಂತರ  ಕಾರವಾರ ಬಂದರಿಗೆ ಬಂದಿದೆ. ಕಾರವಾರದಿಂದ 600 ಕಿ.ಮೀ. ದೂರದಲ್ಲಿರುವ ಶಕ್ತಿನಗರಕ್ಕೆ ತಲುಪಿಸುವ ಹೊಣೆಗಾರಿಕೆಯನ್ನು ಮಹಾರಾಷ್ಟ್ರ ಮೂಲದ ಬಿ.ಎಸ್. ಸಾನಿ ಗ್ರುಪ್ಸ್ ಹೊತ್ತುಕೊಂಡಿದೆ. ಜುಲೈನಿಂದ ಇದನ್ನು ಸಾಗಿಸುವ ಕಾರ್ಯ ಪ್ರಾರಂಭವಾಗಿದೆ. ಮುಂದಿನ ವರ್ಷ ಜನವರಿ ಅಂತ್ಯಕ್ಕೆ ರಾಯಚೂರು ತಲುಪಲಿದೆ ಎಂದು   ಬಿ.ಎಸ್. ಸಾನಿ ಗ್ರುಪ್ಸ್‌ನ ನೌಕರ ಮುದಿತ್,  ಅಶೋಕ ಬಸಿನ್ `ಪ್ರಜಾವಾಣಿ'ಗೆ    ತಿಳಿಸಿದರು.

ಕಾರವಾರದಿಂದ ರಾಯಚೂರು ವಿದ್ಯುತ್ ಘಟಕದ ವರೆಗೆ ಇದನ್ನು ತಲುಪಿಸಲು ಕೋಟ್ಯಂತರ   ರೂಪಾಯಿ   ವೆಚ್ಚವಾಗಲಿದೆ. ಯಂತ್ರ 400ಟನ್ ತೂಕ ಇರುವುದರಿಂದ ಮಾರ್ಗ ಮಧ್ಯದಲ್ಲಿ ಬರುವ ಸೇತುವೆಗಳ ಮೇಲೆ ಈ ವಾಹನ ಹಾಯ್ದು ಹೋಗುವುದಿಲ್ಲ. ಹಾಗಾಗಿ ಸೇತುವೆ ಕೆಳಗೆ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿ, ಈಗಾಗಲೇ 500 ಕಿ.ಮೀ ದೂರ ಸಾಗಿಸಿಕೊಂಡು ಬರಲಾಗಿದೆ. ಈ ವರೆಗೆ ಒಟ್ಟು ಇಪ್ಪತ್ತು ತಾತ್ಕಾಲಿಕ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಒಂದು ದಿನಕ್ಕೆ 20ರಿಂದ 30 ಕಿ.ಮೀ ಚಲಿಸುತ್ತದೆ

ಕಮತಗಿ ಸಮೀಪ ಮಲಪ್ರಭಾ ನದಿಯಲ್ಲಿ ನಿರ್ಮಿಸಿದ ಸೇತುವೆ ಹಳೆಯದಾಗಿದೆ. ಹೀಗಾಗಿ  ನದಿಯಲ್ಲಿ ರಸ್ತೆ ನಿರ್ಮಾಣ ಮಾಡಿ ಯಂತ್ರವನ್ನು  ಸಾಗಿಸಲಾಗುತ್ತಿದೆ ಎಂದು  ಹುನಗುಂದದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಬಳಲೂದ ತಿಳಿಸಿದರು.                                   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.