ADVERTISEMENT

ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 7:41 IST
Last Updated 8 ಜುಲೈ 2017, 7:41 IST
ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು
ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು   

ರಬಕವಿ ಬನಹಟ್ಟಿ: ರಾಹುಲ್‌ ಗಾಂಧಿಯವರ ನಾಯಕತ್ವವನ್ನು ಅವರ ಮಿತ್ರ ಪಕ್ಷಗಳು ಒಪ್ಪಿಕೊಳ್ಳುತ್ತಿಲ್ಲ. ಅವರು ಬೇರೆ ನಾಯಕರ ಹುಡುಕಾಟದಲ್ಲಿ ಇದ್ದಾರೆ. ಇಂಥ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ದುರ್ಬಲ ಪ್ರಧಾನಿ ಎಂದು ಕರೆದಿರುವುದನ್ನು ದೇಶದ ಜನ ಒಪ್ಪುವುದಿಲ್ಲ.

ಆದ್ದರಿಂದ ರಾಹುಲ್‌ ಗಾಂಧಿ ಈ ಮಾತನ್ನು ಹಿಂದಕ್ಕೆ ಪಡೆದುಕೊಂಡು ದೇಶದ ಜನತೆ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ಶುಕ್ರವಾರ ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಂದಾಲ್‌ಗೆ ಬಿ.ಎಸ್‌.ಯಡಿ ಯೂರಪ್ಪನವರ ಅಧಿಕಾರ ಅವಧಿಯಲ್ಲಿ ನೀರು ಹರಿಸಲಾಗಿದೆ ಎಂದು ಎಂ.ಬಿ. ಪಾಟೀಲರು ಆರೋಪ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಈ ಕುರಿತು ಸಮಗ್ರವಾಗಿ ತನಿಖೆ ಮಾಡಿಸಲಿ, ವಾಸ್ತವಿಕ ಸ್ಥಿತಿ ಹೊರಬರುತ್ತದೆ ಎಂದರು. ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರು ಕೂಡಿಕೊಂಡು ನೀರಾವರಿ ಇಲಾಖೆಯಲ್ಲಿ ಬೃಹತ್‌ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಎಂ.ಬಿ. ಪಾಟೀಲರು ನನ್ನ ಮೇಲೆ ಗೌರವ ಇಟ್ಟುಕೊಂಡಿರುವುದೇ ಅಕ್ಷಮ್ಯ ಅಪರಾಧ ಎಂದು ಬಿಎಸ್‌ವೈ ತಿಳಿಸಿದರು.

ADVERTISEMENT

ನೇಕಾರರ ಸಾಲ ಮನ್ನಾ ಮಾಡಿ: ಈ ಭಾಗದ ಜ್ವಲಂತ ಸಮಸ್ಯೆಯಾದ ನೇಕಾರರ ಸಾಲವವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸಾಲವನ್ನು ಮನ್ನಾ ಮಾಡದೆ ಇದ್ದರೆ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ನೇಕಾರ ಸಮು ದಾಯವು ಬೃಹತ್‌ ಪ್ರಮಾಣದಲ್ಲಿ ಹೋರಾಟ ನಡೆಸುತ್ತಿದೆ.

ಇದಕ್ಕೆ ನಮ್ಮ ಬೆಂಬಲವಿದೆ ಎಂದರು. ರೈತರಿಗೆ 50 ಸಾವಿರ ಬದಲಾಗಿ ಒಂದು ಲಕ್ಷದವರೆಗೆ ಸಾಲ ಮನ್ನಾವನ್ನು ಯಾವುದೇ ಷರತ್ತುಗಳಿಲ್ಲದೆ ಮಾಡಬೇಕು. ನಾನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತ ಹಾಗೂ ನೇಕಾರ ಎರಡೂ ಸಮು ದಾಯಗಳ ಸಾಲ ಮನ್ನಾ ಮಾಡಲಾಗಿತ್ತು ಎಂದು ಬಿಎಸ್‌ವೈ ತಿಳಿಸಿದರು.

ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧ ಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಯಲ್ಲಿ ಯಾವುದೇ ಗೊಂದಲವಿಲ್ಲ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ಸಿದ್ದು ಸವದಿ ಈ ಬಾರಿ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿ ಸಿದ್ದು ಸವದಿ ತೇರದಾಳ ಕ್ಷೇತ್ರದ ಅಭ್ಯರ್ಥಿ ಎಂದು ಪರೋಕ್ಷವಾಗಿ ಘೋಷಣೆ ಮಾಡಿದರು.

ಜಿಲ್ಲೆಯಲ್ಲಿ ಬಿಜೆಪಿಗೆ ಸಾಕಷ್ಟ ಜನ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಕುಳಿತುಕೊಂಡು ಟಿಕೆಟ್‌ ಕೊಡದೆ ಜನರ ಮತ್ತು ಮತದಾರರ ಅಭಿಪ್ರಾಗಳನ್ನು ಸರ್ವೆ ಮಾಡಿಸಿ ಹಂಚಿಕೆ ಮಾಡ ಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಸವದಿ, ಶಾಸಕ ಗೋವಿಂದ ಕಾರಜೋಳ, ಮಾಜಿ ಸಚಿವ ಮುರುಗೇಶ ನಿರಾಣಿ, ರಾಜು ಅಂಬಲಿ, ಮಹಾ ದೇವಪ್ಪ ಹಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.