ADVERTISEMENT

ಪ್ರಕೃತಿ ಸಿರಿಯಲ್ಲಿ ಅರಣ್ಯ ದಸರಾ ಉತ್ಸವ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 7:15 IST
Last Updated 9 ಅಕ್ಟೋಬರ್ 2011, 7:15 IST

ಕೆರೂರ: ಸದಾ ಪ್ರಕೃತಿ ಸೊಬಗಿನಲ್ಲಿ ನಳ ನಳಿಸುವ ಸುಂದರ ತಾಣ `ರಾಮತೀರ್ಥ~ವು ಈ ಬಾರಿ `ಅರಣ್ಯ ದಸರೆ~ಯ ವಿಭಿನ್ನ ಧಾರ್ಮಿಕ ಆಚರಣೆಯ ಮೂಲಕ ಸಹಸ್ರಾರು ಭಕ್ತರ ಗಮನ ಸೆಳೆಯಿತು.

ಋಷಿ ಮುನಿಗಳು ತಪಸ್ಸು ಮಾಡಿದ ಸುಕ್ಷೇತ್ರದಲ್ಲಿ ವನಸಿರಿಯ ಬಂಡೆಗಳ ಗರ್ಭದಿಂದ ಜುಳು ಜುಳು ಹರಿದು ಬರುವ ತೀರ್ಥಸ್ವರೂಪ ನೀರಿನ ಝರಿ, ದೊಡ್ಡ ಬಂಡೆಗಳ ಮೇಲೆಯೇ ಆಕಾಶದೆತ್ತರಕ್ಕೆ ಬೆಳೆದು ನಿಂತ ಆಲದ ಮರಗಳ ದಟ್ಟ ನೆರಳು, ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ತೀರ್ಥ ಬಸವನ ದೇಗುಲ ಇವೆಲ್ಲವುಗಳ ಮಧ್ಯೆ ಅರಣ್ಯ ದಸರೆ ವೈಭವದಿಂದ  ನಡೆಯಿತು.

ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹಾಗೂ ಸದ್ಗುರು ಶ್ರದ್ಧಾನಂದ ಸ್ವಾಮಿಗಳ ಕೃಪಾ ಶೀರ್ವಾದ ಮೂಲಕ ಘಟ ಸ್ಥಾಪನೆ, 11 ಮಂದಿ ದಾರ್ಶನಿಕರಿಂದ ಪುರಾಣ ಪಠಣ, ಹೋಮ ಹವನದೊಂದಿಗೆ ನಾಡಿನ ಸುಭಿಕ್ಷೆಗಾಗಿ ಬಾಲ ನವದುರ್ಗೆಯರಿಂದ ವಿಶೇಷ ಮಂಗಲ ಪೂಜೆ ಇದೇ ಮೊದಲ ಬಾರಿ ನಡೆಯಿತು.
ಮಹಾನವಮಿ ಅಂಗವಾಗಿ ಒಂಬತ್ತು ದಿನ ದೇವಿ ಪುರಾಣ, ಜಪ-ತಪ ಹಾಗೂ ಯಜ್ಞ ಮತ್ತಿತರ ಧಾರ್ಮಿಕ  ಕಾರ್ಯಗಳು ನಡೆದವು.

ಪೂರ್ಣಾನಂದ ಮಠದ ನೀಲಲೋಹಿತ ಸ್ವಾಮೀಜಿ ಹಾಗೂ ವಿವಿಧ ಪೂಜ್ಯರ ನೇತೃತ್ವದಲ್ಲಿ ವಿಧಿ ವಿಧಾನಗಳು ಜರುಗಿದವು.

ಸುತ್ತಲಿನ ಉಗಲವಾಟ, ನೀಲಗುಂದ, ಮುಷ್ಟಿಗೇರಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಸಂಭ್ರಮಪಟ್ಟರು.

ಒಂಬತ್ತು ದಿನ ಸಿಹಿ ಹೋಳಿಗೆ, ಗೋಧಿ ಹುಗ್ಗಿ ಮುಂತಾದ ಭಕ್ಷ್ಯಗಳ ದಾಸೋಹವೂ ನಡೆಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.