ಬೀಳಗಿ: ಎರಡು ನದಿಗಳ ಮಧ್ಯೆ ನಾವಿದ್ದೇವೆ. ‘ದೋ ಆಬ್’ ತಾಲ್ಲೂಕು ಎಂದೇ ಹೆಸರು ಮಾಡಿದ ನಮ್ಮ ತಾಲ್ಲೂಕಿಗೆ ಎಂದೆಂದಿಗೂ ಜಲಕ್ಷಾಮ ಬರದು. ನಾವು ಬೇರೆ ಮತಕ್ಷೇತ್ರಕ್ಕೆ, ಬೇರೆ ತಾಲ್ಲೂಕಿಗೆ ನೀರು ಪೂರೈಸುವಷ್ಟು ಸಿರಿವಂತರು ಎಂದು ಬೀಗುತ್ತಿದ್ದ ಬೀಳಗಿ ತಾಲ್ಲೂಕಿನವರಿಗೆ ಬರಸಿಡಿಲು ಬಡಿದಿದೆ.
ಗುಳಬಾಳ ಬಳಿ ಕೃಷ್ಣಾ ನದಿಗೆ ಎರಡು ಹಂತದಲ್ಲಿ ನೀರು ಒಳಸೆಳೆಯುವ ಬಾವಿ (ಇನ್ ಟೇಕ್ ವೆಲ್) ನಿರ್ಮಿಸಿ ಬೀಳಗಿ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದೆ. ಇಲ್ಲಿಂದಲೇ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಸ ಲಾಗುತ್ತಿದೆ. ಜಾಕ್ ವೆಲ್ ಮೂಲಕ ಏತ ನೀರಾವರಿ ಯೋಜನೆಗೆ ನೀರು ಸರಬ ರಾಜು ಕೂಡಾ ಇಲ್ಲಿಂದಲೇ ನಡೆಯು ತ್ತಿದೆ. ಅಷ್ಟೊಂದು ದೊಡ್ಡ ಮಡುವು (ನೀರಿನ ಸಂಗ್ರಹ) ಈಗಂತೂ ಬೀಳಗಿ ಪಟ್ಟಣದ ಎರಡೂ ಇನ್ ಟೇಕ್ ವೆಲ್ ಗಳು ಮುಗಿಲಿಗೆ ಬಾಯ್ದೆರೆದು ನಿಂತಿವೆ.
ಜನವರಿವರೆಗೆ ಮಾತ್ರ ನೀರು ಪೂರೈಸಬೇಕಾದ ಏತ ನೀರಾವರಿ ಯೋಜನೆಗೆ ಈ ವರ್ಷ ಮಾರ್ಚ್ವರೆಗೆ ಎರಡು ತಿಂಗಳು ಕಾಲ ನೀರಾವರಿಗೆ ಹೆಚ್ಚು ನೀರು ಹರಿಸಿದ್ದೇ ನದಿಯಲ್ಲಿ ನೀರು ಕಡಿಮೆಯಾದುದಕ್ಕೆ ಕಾರಣ ವೆಂದು ಹೇಳಲಾಗುತ್ತಿದೆ. ಸೋಮವಾರ ತಮಗೆ ಮುತ್ತಿಗೆ ಹಾಕಿದವರ ಮುಂದೆ ‘ಅಧಿಕಾರಿಗಳ ನಿರ್ಲಕ್ಷ್ಯವೇ ನದಿಯಲ್ಲಿ ನೀರು ಕಡಿಮೆಯಾಗಲು ಮುಖ್ಯ ಕಾರಣ’ ವೆಂದು ಮಾಜಿ ಸಚಿವ ಎಸ್.ಆರ್. ಪಾಟೀಲ ನೀಡಿದ ಹೇಳಿಕೆ ಕೂಡಾ ಇದಕ್ಕೆ ಇಂಬು ಕೊಡುತ್ತದೆ.
ಪಟ್ಟಣಕ್ಕೆ ಕೃಷ್ಣಾ ನದಿಯಿಂದ ನೀರು ಪೂರೈಕೆ ಇಲ್ಲವೆಂದು ಮುಖ್ಯಾಧಿಕಾರಿ ಗಳು ಹೇಳಿದ್ದಾರೆ. ಬಹುಗ್ರಾಮ ಕುಡಿ ಯುವ ನೀರು ಪೂರೈಕೆ ಕೊಳವೆಗಳು ನದಿ ಪಾತ್ರದಿಂದ ಮೇಲೆ ಬಂದಿರು ವುದರಿಂದ ಸಂಬಂಧಿಸಿದ ಇಲಾಖೆ ಆಳ ವಾದ ಕಮರಿ ತೋಡಿ ಕೊಳವೆಗಳನ್ನು ಕೆಳಕ್ಕಿಳಿಸಲು ಹಿಟಾಚಿಯ ಮೂಲಕ ಕಾರ್ಯೋನ್ಮುಖವಾಗಿದೆ. ಪಟ್ಟಣ ಪಂಚಾಯ್ತಿಯವರು ತೇಲುವ ತೆಪ್ಪದ ಮೇಲೆ ಮೋಟಾರುಗಳನ್ನು ಅಳವಡಿಸಿ ನೀರು ಒಳಸೆಳೆಯುವ ಯಂತ್ರಕ್ಕೆ ನೀರು ಪೂರೈಕೆ ಮಾಡಲು ತಜ್ಞರೊಡನೆ ಸಮಾಲೋಚನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.