ADVERTISEMENT

ಮಕ್ಕಳ ಶಿಕ್ಷಣಕ್ಕೆ ಶಪಥ ಮಾಡಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 9:25 IST
Last Updated 13 ಅಕ್ಟೋಬರ್ 2011, 9:25 IST

ಬೀಳಗಿ: ಆರ್ಥಿಕವಾಗಿ ಎಂಥ ಸಂಕಷ್ಟ ಬಂದೊದಗಿದರೂ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿಸುತ್ತೇವೆಂದು ತಾಯಂದಿರು ಶಪಥ ಮಾಡಬೇಕೆಂದು  ಸಚಿವ ಮುರುಗೇಶ ನಿರಾಣಿ ವಾಲ್ಮೆಕಿ ಜನಾಂಗದ ಮಹಿಳೆಯರಿಗೆ ಸಲಹೆ ಮಾಡಿದರು.

ಅವರು ತಾಲ್ಲೂಕಾಡಳಿತದಿಂದ ಮಂಗಳವಾರ ಮಿನಿ ವಿಧಾನ ಸೌಧದ ಹೊರಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೆಕಿ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಣ ಪಡೆಯುವುದರೊಂದಿಗೆ ಸರಕಾರ ಕೊಡಮಾಡುವ ಸೌಲಭ್ಯದ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಲು ಸಲಹೆ ನೀಡಿದರು. ಬೀಳಗಿಯಲ್ಲಿ 1ಎಕರೆ ಪ್ರದೇಶದಲ್ಲಿ ರೂ 1ಕೋಟಿ ವೆಚ್ಚದಲ್ಲಿ ಸಿಂಧೂರ ಲಕ್ಷ್ಮಣ ಸ್ಮಾರಕ ಭವನ ನಿರ್ಮಿಸಲು ತಯಾರಿ ನಡೆದಿದ್ದು ಈಗಾಗಲೇ ರೂ 50 ಸಾವಿರ ಬಿಡುಗಡೆಗೊಂಡಿದೆ ಎಂದು ಹೇಳಿದರು.

 ವಿಧಾನ ಪರಿಷತ್ ಪ್ರತಿ ಪಕ್ಷದ ಉಪನಾಯಕ ಎಸ್.ಆರ್. ಪಾಟೀಲ,  ಮಹಾಪುರುಷರನ್ನು ಯಾವುದೇ ಒಂದು ಜಾತಿ, ವರ್ಗಕ್ಕೆ ಸೀಮಿತಗೊಳಿಸದೇ ಅವರ ತತ್ವಾದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಡಾ. ಎ.ಎಸ್. ಮುದಕಪ್ಪನವರ ಉಪನ್ಯಾಸ ನೀಡಿದರು. ಜಿ.ಪಂ. ಸದಸ್ಯರುಗಳಾದ ಎಚ್.ಆರ್.ನಿರಾಣಿ, ಸುಧಾ ಸೋರಗಾಂವಿ, ಶೋಭಾ ತೋಟಗೇರ, ತುಂಗವ್ವ ಮೋಕಾಶಿ, ತಾ.ಪಂ. ಉಪಾಧ್ಯಕ್ಷ ಹನುಮಂತ ಮಾದರ, ಪ.ಪಂ. ಅಧ್ಯಕ್ಷೆ ಸಾವಿತ್ರಿ ಉಗ್ರಾಣ, ಉಪಾಧ್ಯಕ್ಷ ಮಹಾಂತೇಶ ಅಂಗಡಿ ಅತಿಥಿಗಳಾಗಿದ್ದರು.
 ಕೆ.ವಿ. ಪಾಟೀಲ, ವಿ.ಜಿ. ರೇವಡಿಗಾರ, ಟಿ.ವೈ. ಜಾನಮಟ್ಟಿ ಹಾಜರಿದ್ದರು.

 ತಹಸೀಲ್ದಾರ್ ಎಲ್.ಬಿ. ಕುಲಕರ್ಣಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ. ದಾಸರ ವಂದಿಸಿದರು. ಸಂಗಮೇಶ ಸಣ್ಣತಂಗಿ, ಗುರುರಾಜ ಲೂತಿ ನಿರೂಪಿಸಿದರು.  ಸಮಾರಂಭಕ್ಕೂ ಮುನ್ನ ಸಕಲ ವಾದ್ಯ ವೈಭವ, ಆರತಿ, ಪೂರ್ಣ ಕುಂಭದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.