ADVERTISEMENT

ಮೂಲಸೌಕರ್ಯಕ್ಕೆ ಆಗ್ರಹಿಸಿ ಗ್ರಾಂ.ಪಂಗೆ ಬೀಗ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 10:40 IST
Last Updated 9 ಅಕ್ಟೋಬರ್ 2012, 10:40 IST

ಕಮತಗಿ (ಅಮೀನಗಡ): ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಇಲ್ಲಿಯ ವಾರ್ಡ್ ನಂ.10ರ ಸಾರ್ವಜನಿಕರು ಸೋಮವಾರ ತಮಟೆ ಬಾರಿಸುತ್ತಾ, ಪ್ರತಿಭಟನಾ ಮೆರವಣಿಗೆ ನಡೆಸಿ, ಗ್ರಾ.ಪಂ ಕಾರ್ಯಾಲಯಕ್ಕೆ ಬೀಗ ಹಾಕಿದರು.

ವಾರ್ಡ್‌ನಿಂದ ತಮಟೆ ಬಾರಿಸುತ್ತಾ ಗ್ರಾ.ಪಂಗೆ ಬಂದ ಪ್ರತಿಭಟನಾಕಾರರು, ಆಡಳಿತ ಅವ್ಯವಸ್ಥೆ, ವಾರ್ಡಿನ ಸದಸ್ಯರ, ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಒ ಎಸ್.ಜೆ. ಜಿತೂರಿ ಅವರು, ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆ ಹರಿಸುತ್ತೇನೆ ಎಂದು ಭರವಸೆ ನೀಡುತ್ತಿದ್ದಂತೆ, ಈ ರೀತಿಯ ಎಷ್ಟೋ ಪೊಳ್ಳು ಭರವಸೆಗಳನ್ನು ನಿಮ್ಮಿಂದ ಕಂಡಿದ್ದೇವೆ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಎಂ.ವೆಂಕಟೇಶ ಮಾತನಾಡಿದರು. ಸ್ಥಳಕ್ಕೆ ಆಗಮಿಸಿದ ತಾ.ಪಂ ಇಒ ಆರ್.ವಿ. ತೋಟದ ಅವರಿಗೆ ಪ್ರತಿಭಟನಾಕಾರರು, ಮಹಿಳೆಯರಿಗೆ ಶೌಚಾಲಯ ನಿರ್ಮಿಸಬೇಕು, ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂಬುದು ಸೇರಿದಂತೆ 10ಕ್ಕೂ ಹೆಚ್ಚು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

ಮನವಿಯಲ್ಲಿರುವ ಬಹುತೇಕ ಎಲ್ಲಾ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಲಾಗುವುದು ಎಂದು ಭರವಸೆ ನೀಡಿ, ವಾರ್ಡ್‌ನಲ್ಲಿ ಜನರೊಂದಿಗೆ ಸಂಚರಿಸಿ, ಸಮಸ್ಯೆಯನ್ನು ತಿಳಿದುಕೊಂಡರು.

ಮಂಜುಳಾ ಜೋಶಿ, ಕಲಾವತಿ ತಿಮ್ಮೋಪೂರ, ಮುರುಗೆವ್ವ ಶಾಂತಗೇರಿ, ರಾಜವ್ವ ಶಿವಗೇರಿ, ಶಿವಕ್ಕ ಜ್ಯೋಶಿ, ಘೋಷಬಿ ಡಾಲಾಯತ್, ನೀಲವ್ವ ಭಜಂತ್ರಿ, ಶಾಂತಾಬಾಯಿ ನಾಯಕ, ಶಂಕ್ರವ್ವ ತಳವಾರ, ಮಹಾದೇವಿ ಅಲ್ಲೂರ, ಮಲ್ಲಪ್ಪ ಸಿಪೂಟ್,ರಫೀಕ್ ಡಾಲಾಯತ್, ವೆಂಕಟೇಶ ಮಲಜಿ, ಶಂಕ್ರಪ್ಪ ಹಳ್ಳದ, ಬಂದಗೀಸಾಬ ಡಾಲಾಯತ್ ಮಂಜು ಭಜಂತ್ರಿ, ರಸೂಲಸಾಬ ತಹಶೀಲ್ದಾರ, ಬಂದಗಿಸಾಬ ಡಾಲಾಯತ್, ಮಲ್ಲೆೀಶ ಬೀಳಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.