ಆಲಮಟ್ಟಿ: ಸಪ್ತ ಗ್ರಾಮಾಧಿದೇವೋ.. ಭೂತ್ ಸರ್ವೇಶಾನ್ ಜಗತಾಂ ಪತಿಃ
ಹನುಮಾನ್ ಸ ಸ್ವಯಂ ವ್ಯಕ್ತೋ.., ಯತೋ ರಾಮಾಜ್ಞಾ ಯಾ ಸ್ತುತಃ ಎಂಬ ವಸಿಷ್ಠ ರಾಮಾಯಣದಲ್ಲಿ ಉಲ್ಲೇಖವಾಗಿರುವ ಉಕ್ತಿಯಂತೆ ಶ್ರಿರಾಮನು ಲೋಕ ಕಲ್ಯಾಣಾರ್ಥವಾಗಿ, ಕೃಷ್ಣವೇಣಿಯ ದಕ್ಷಿಣ ತೀರದಲ್ಲಿ ನೆಲೆಸಿದ್ದೇನೆ. ನೀನು ಉತ್ತರ ತೀರದಲ್ಲಿ ನಮ್ಮ ಆಶ್ರಮದ ಸಮ್ಮುಖವಾಗಿ ನಿಲ್ಲು. ಹಾಗೂ ಭಕ್ತರನ್ನು ರಕ್ಷಿಸು ಎಂದು ಆಜ್ಞಾಪಿಸಿದನು. ಪ್ರಭುವಿನ ಆಜ್ಞಾನುಸಾರವಾಗಿ ಸಾಕ್ಷಾತ್ ಶ್ರಿ ವಾಯು ದೇವರು ಕೃಷ್ಣವೇಣಿ ತೀರದಲ್ಲಿ ಸಪ್ತಪುರ (ಯಲಗೂರ)ದಲ್ಲಿ ಇಂದಿಗೂ ಅಧೀಷ್ಠಿತ ರಾಗಿದ್ದಾರೆ. ಸುತ್ತಲಿನ ಏಳು ಗ್ರಾಮಗಳಿಗೆ ಅಧಿಪತಿಯಾಗಿ, ಭಕ್ತರು ಉದ್ಧಾರ ಮಾಡುತ್ತಿದ್ದಾರೆ. ಶ್ರಿ ಕ್ಷೇತ್ರ ಯಲಗೂರವು, ಯಲಗೂರೇಶನ ಸನ್ನಿಧಾನ ದಿಂದ ಪರಮ ಪವಿತ್ರ ಕ್ಷೇತ್ರ ಯಾತ್ರಾ ಸ್ಥಳವಾಗಿದೆ.
ಶ್ರೀ ಯಲಗೂರೇಶನ ಕಾರ್ತಿಕೋತ್ಸವ ಫೆ. 11ರಿಂದ ಮೂರು ದಿನಗಳ ಕಾಲ ಜರುಗಲಿದೆ. ಯಲಗೂರೇಶನ ಪ್ರತಿಮೆಯೂ ಭವ್ಯವಾಗಿದ್ದು, ಸ್ವಯಂ ವ್ಯಕ್ತವಾಗಿದ್ದು, ನೋಡಿದವರ ಮನದಲ್ಲಿ ಭಯ ಭಕ್ತಿಗಳು ಉಂಟಾಗುತ್ತವೆ. ಮನವು ಪರಿಶುದ್ಧಗೊಂಡು ಆನಂದದಲ್ಲಿ ಮೈ ಮರೆಯುತ್ತದೆ.
ಭೂತ ಬಾಧೆಗಳಿಂದ, ರೋಗ ರುಜಿನಗಳಿಂದ ರಕ್ಷಣೆ ಕೊಡುವ ಈ ಯಲಗೂರೇಶನ ಸೇವೆಗೆ ಪ್ರತಿ ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕುಂಕುಮಾರ್ಚನೆ, ಎಲೆ ಪೂಜೆ ಹಾಗೂ ಸುವರ್ಣಾಭರಣಗಳಿಂದ, ಶಲ್ಯ ಮುಂಡಾಸುಗಳಿಂದ ಯಲಗೂರೇಶನನ್ನು ಅಲಂಕರಿಸುತ್ತಾರೆ.
ಕಾರ್ಯಕ್ರಮಗಳು: ಶ್ರೀ ಯಲಗೂರೇಶನ ಕಾತಿರ್ಕೋತ್ಸವವು ಫೆ. 11ರಂದು ಜರುಗುವುದು. ಆ ದಿನ ಬೆಳಿಗ್ಗೆ ಪಂಚಾಮೃತ ಅಭಿಷೇಕ ಪವಮಾನ ಹೋಮ, ಮಹಾಪೂಜೆ, ತೀರ್ಥ ಪ್ರಸಾದ, ರಾತ್ರಿ ಕಾರ್ತಿಕೋತ್ಸವ ನಡೆಯಲಿದೆ.
ಪಂ. ಶ್ರೀಕಾಂತಾಚಾರ್ಯ ಬಿದರಕುಂದಿ, ಭೀಮಸೇನಾಚಾರ್ಯ ಪಾಂಡುರಂಗಿ ಮತ್ತು ಪಂ. ನರಸಿಂಹಾಚಾರ್ಯ ಗೋಠೆ ಇವರಿಂದ ಪ್ರವಚನ, ಸಂಜೆ ನಾಡಿನ ಸುಪ್ರಸಿದ್ಧ ಸಂಗೀತಗಾರರಿಂದ ದಾಸ ಸಾಹಿತ್ಯ ಸಂಗೀತ ಕಾರ್ಯಕ್ರಮ, ನಟರಾಜ ಕಲಾ ನಿಕೇತನ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ, ಬೆಂಗಳೂರಿನ ಹರಿದಾಸ ಸಂಘದವರಿಂದ ನೃತ್ಯ ರೂಪಕ, ಬಿ.ಬಿ. ಕುಲಕರ್ಣಿ ಮತ್ತು ಶಾಂತಾಬಾಯಿ ಕವತಾಳ ಮತ್ತು ಭಾರ್ಗವಿ ಕುಲಕರ್ಣಿ, ನಾರಾಯಣ ತಾಸಗಾಂವ್, ಸಂತೋಷ ಗದ್ದನಕೇರಿ, ಗಂಗಾಖೇಡ ಸಹೋದರರು, ಮಹಾಜನ ಸಮೀರವಾಡಿ, ವೈ. ಸುಧೀಂದರ, ರಾಘವೇಂದ್ರ ಕಟ್ಟಿ, ಓಂಕಾರ ಕರಕಂಬಿ, ರಾಜೇಂದ್ರ ದೇಶಪಾಂಡೆ ಮತ್ತು ಗಾಯತ್ರಿ ದೇಶಪಾಂಡೆ ಹಾಗೂ ಇತರರಿಂದ ಅಹೋರಾತ್ರಿ ಸಂಗೀತ, ಸಾಂಸ್ಕೃತಿಕ, ದಾಸವಾಹಿನಿ ಕಾರ್ಯಕ್ರಮಗಳು ಮತ್ತು ಬೆಳಗಿನ ಜಾವ ಪಲ್ಲಕ್ಕಿ ಸೇವೆ, ಕಕ್ಕಡಾರತಿ ಹಾಗೂ ದೀಪೋತ್ಸವ ನಡೆಯಲಿದೆ.
ಫೆ. 12ರಂದು ಬೆಳಿಗ್ಗೆ ದೀಪೋತ್ಸವ, ಪಲ್ಲಕ್ಕಿ ಸೇವೆ, ಮಂತ್ರ ಪರೀಕ್ಷೆ, ಮಹಾಪೂಜೆ, ರಾಜಗೋಪಾಲ ಮತ್ತು ವಿಜಯಲಕ್ಷ್ಮಿ ಕಲ್ಲೂರಕರ, ನಾಡಿನ ಶ್ರೇಷ್ಠ ಕಲಾವಿದರಾದ ಡಾ. ಮುದ್ದುಮೋಹನ ಹಾಗೂ ಸಂಗೀತಾ ಕಟ್ಟಿ ಇವರಿಂದ ಸಂಗೀತ ಕಾರ್ಯಕ್ರಮ ಮತ್ತು ದಾಸವಾಣಿ ಮತ್ತು ಪ್ರಸಾದ ವಿತರಣೆ ಸಂಜೆ ರಥೋತ್ಸವ ಹಾಗೂ ರಾತ್ರಿ 8ಕ್ಕೆ ಹೊಂಡ ಪೂಜೆ, ನಂತರ ಪಲ್ಲಕ್ಕಿಸೇವೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.