ಕೆರೂರ: ಶ್ರದ್ಧಾಭಕ್ತಿಯ ರಾಚೋಟೇಶ್ವರನ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು ವಿಜೃಂಭಣೆಯ ರಥೋತ್ಸವ ಪಟ್ಟಣದಲ್ಲಿ ಜರುಗಿತು.
ಭಕ್ತಿಭಾವಗಳ ಪರಾಕಾಷ್ಠೆ ಮೇಳೈಸುವ ‘ಅಗ್ಗಿ ಉತ್ಸವ’ ಒಂದೆಡೆಯಾದರೆ, ಕ್ರೀಡಾ ಸ್ಫೂರ್ತಿಯ ಇಮ್ಮಡಿಸಲು ಹಿಂದಿನ ಪೂರ್ವಜರು ಬೆಳೆಸಿದ ಅಪ್ಪಟ ಗ್ರಾಮೀಣ ಕ್ರೀಡೆ ಕುಸ್ತಿ ಪಂದ್ಯಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದು ವೈವಿಧ್ಯಮಯ ಜಾತ್ರೆಯ ಮುಸ್ಸಂಜೆ ವೇಳೆ ಕ್ರೀಡೆಗೆ ಮತ್ತಷ್ಟು ರಂಗು ತುಂಬಿದವು.
ಪ್ರತಿನಿತ್ಯ ಮುಸ್ಸಂಜೆ ವೇಳೆಗೆ ದೇಗುಲಕ್ಕೆ ಅನತಿ ದೂರದಲ್ಲಿರುವ ಕುಸ್ತಿ ಅಖಾಡಾದಲ್ಲಿ ಜರುಗಿದ ಪಂದ್ಯ ವೀಕ್ಷಿಸಲು ಸ್ಥಳೀಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ, ಕ್ರೀಡಾಳುಗಳಿಗೆ ಶಿಳ್ಳೆ, ಚಪ್ಪಾಳೆಗಳ ಮೂಲಕ ಬೆಂಬಲ ಸೂಚಿಸಿದರು.
ಕುಸ್ತಿ ಆಟದ ಉತ್ಸಾಹಕ್ಕೆ ಬುಗ್ಗೆಯಂತೆ ಇಂದಿನ ಸಂಜೆ ಕೆಲವು ಚಿಣ್ಣರು ಸಹ ಅಂಗಳಕ್ಕಿಳಿದು ಪಟ್ಟು ಬಿಡದೇ ತೊಡಗಿದ್ದರು.
ಇಂದು ಆಧುನಿಕತೆಯ ಭರಾಟೆಯಲ್ಲಿ ಅಪ್ಪಟ ಗ್ರಾಮೀಣ ಕ್ರೀಡೆಗಳು ಆಭಿರುಚಿ ಕಳೆದುಕೊಳ್ಳುತ್ತಿವೆ ಎಂಬ ಆರೋಪಕ್ಕೆ ಇಲ್ಲಿನ ಪಂದ್ಯಗಳು ಅಪವಾದವೆನ್ನುವಂತೆ ನಿತ್ಯ ಸಹಸ್ರಾರು ಕ್ರೀಡಾಭಿಮಾನಿಗಳು ಕಿಕ್ಕಿರಿದು ಸೇರಿದ್ದು, ಕುಸ್ತಿ ಬಗೆಗಿನ ಆಸಕ್ತಿ ಕುಂದಿಲ್ಲ ಎಂಬುದಕ್ಕೆ ನಿದರ್ಶನ ಆಗಿತ್ತು. ಇನ್ನು ಮೂರು ದಿನಗಳ ಕಾಲ ಪಂದ್ಯಗಳು ನಿತ್ಯ ಸಂಜೆ ಜರುಗುವವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.