ADVERTISEMENT

ಸರ್ಕಾರದ ವೈಫಲ್ಯ ಜನರ ಮುಂದಿಡಿ: ನಿರಾಣಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 6:17 IST
Last Updated 25 ನವೆಂಬರ್ 2017, 6:17 IST

ಬೀಳಗಿ: ‘ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುವಂತೆ’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು. ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಪರಿವರ್ತನಾ ಯಾತ್ರೆ ಸಿದ್ಧತೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆರಕಲ್ ಏತ ನೀರಾವರಿ ಯೋಜನೆಯಡಿ 3.8 ಟಿಎಂಸಿ ಅಡಿ ನೀರು ಬಳಸಿಕೊಂಡು ಬೀಳಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 52 ಸಾವಿರ ಎಕರೆ ಭೂಮಿಯನ್ನು ನೀರಾವರಿಗೆ ಒಳಪಡಿಸುವ ಯೋಜನೆಗೆ ಮಂಜೂರಾತಿ ಪಡೆಯಲಾಗಿತ್ತು. ಆದರೆ ಈಗಿನ ಸರ್ಕಾರ ಅದರಲ್ಲಿ 20 ಸಾವಿರ ಎಕರೆ ಕೈ ಬಿಟ್ಟಿದೆ. ಕೇವಲ ಎರಡು ಟಿಎಂಸಿ ಅಡಿ ನೀರು ಪಡೆಯಲಾಗಿದೆ. ಇದರಿಂದ ರೈತಾಪಿ ವರ್ಗಕ್ಕೆ ಅನ್ಯಾಯವಾಗಿದೆ’ ಎಂದು ಆರೋಪಿಸಿದರು.

‘ನಮ್ಮ ಅವಧಿಯಲ್ಲಿ ಕ್ಷೇತ್ರಕ್ಕೆ ಡಿಪ್ಲೊಮಾ ಕಾಲೇಜು, ಮೊರಾರ್ಜಿ ಹಾಗೂ ನವೋದಯ ಶಾಲೆಗಳನ್ನು ಪ್ರೌಢಶಾಲೆಗಳನ್ನು ಮಂಜೂರಾತಿ ಮಾಡಿಸಲಾಗಿತ್ತು. ಆದರೆ ಈಗಿನ ಸರ್ಕಾರದ ಅವಧಿಯಲ್ಲಿ ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತಸ್ಥರಿಗೆ ಯೋಗ್ಯ ಪರಿಹಾರ ಕೊಡುವಲ್ಲಿ ಈ ಸರ್ಕಾರ ವಿಫಲಾಗಿದೆ ಎಂದು ದೂರಿದರು.

ADVERTISEMENT

ಬೀಳಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರದ ವಸತಿ ಯೋಜನೆಗಳ ಫಲಾನುಭವಿಗಳಿಗೆ ಒಂದು ವಾರದೊಳಗೆ ಹಕ್ಕು ಪತ್ರ ವಿತರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಣ್ಣ ಕಟಗೇರಿ, ಮುಳುಗಡೆ ಹೋರಾಟ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅದೃಶಪ್ಪ ದೇಸಾಯಿ, ಕೆ.ವಿ.ಪಾಟೀಲ, ಎಂ.ಎಂ. ಶಂಭೋೋಜಿ, ರವಿ ದೇಸಾಯಿ, ಮೋಹನ ಜಾಧವ, ಆನಂದ ಇಂಗಳಗಾವಿ, ರಾಮಣ್ಣ ಕಾಳಪ್ಪಗೋಳ, ಸಿದ್ದಪ್ಪ ಕಡಪಟ್ಟಿ, ಈರಣ್ಣ ಗಿಡ್ಡಪ್ಪಗೋಳ, ಹೊಳಬಸು ಬಾಳಶೆಟ್ಟಿ, ನಿಂಗಪ್ಪ ದಂದರಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.