ADVERTISEMENT

‘ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ’

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 8:32 IST
Last Updated 8 ಜನವರಿ 2018, 8:32 IST

ಮುಧೋಳ: ‘ಕೊಪ್ಪಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸ್ಥಳೀಯ ಆಡಳಿತ ಕಾಂಗ್ರೆಸ್ ನಾಯಕರ ಕೈಗೊಂಬೆಯಾಗಿದೆ. ಆಳುವವರ ಅಣತಿಯಂತೆ ಹಿಂದೂ ಸಾಮಾಜಿಕ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಅಡ್ಡಿಗಳು ನಮ್ಮನ್ನು ಮತ್ತಷ್ಟು ಗಟ್ಟಿಮಾಡುತ್ತದೆ ಎಂಬುದನ್ನು ಸರ್ಕಾರ ತಿಳಿದುಕೊಳ್ಳಬೇಕು’ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ಉತ್ತರ ಪ್ರಾಂತ ಪ್ರಧಾನಕಾರ್ಯದರ್ಶಿ ಶಿವಾನಂದ ಬಡಿಗೇರ ತಿಳಿಸಿದ್ದಾರೆ.

‘ಹಿಂದೂ ಜಾಗರಣ ವೇದಿಕೆಯ ಬಳ್ಳಾರಿ ವಿಭಾಗ ಪ್ರಧಾನ ಕಾರ್ಯದರ್ಶಿ, ಕೊಪ್ಪಳ ಜಿಲ್ಲೆ ಗಂಗಾವತಿಯ ಶ್ರೀಕಾಂತ ಹೊಸಕೇರಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರತ್ನಾಕರಶೆಟ್ಟಿ ಕಲ್ಲಡ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಮೂಲಕ ದೌರ್ಜನ್ಯದ ಪರಾಕಾಷ್ಠೆ ಮೆರೆದಿದೆ. ವಿನಾಶಕಾಲೇ ವಿಪರೀತ ಬುದ್ದಿ ಎಂಬಂತಾಗಿದೆ’ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.

‘ಪ್ರಜಾತಂತ್ರ ವಿರೋಧಿ, ಸರ್ವಾಧಿಕಾರಿ ಧೋರಣೆಯ ಬ್ರಿಟಿಷ್‌ ಕಾಲದ ಕಾನೂನಿನ ಈ ಗಡಿಪಾರು ಆದೇಶವನ್ನು ಜಿಲ್ಲಾ ಆಡಳಿತವು ಬೇಷರತ್ ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಹಿಂದೂ ಸಮಾಜದ ಪ್ರಬಲ ಸಾಮಾಜಿಕ ಶಕ್ತಿ ಹಿಂದೂ ಜಾಗರಣ ವೇದಿಕೆಯನ್ನು ‘ಟಾರ್ಗೆಟ್’ ಮಾಡ ಲಾಗುತ್ತಿದೆ. ಮೂಲಭೂತವಾದಿ ಮುಸ್ಲಿಂರನ್ನು ಬಿಟ್ಟು ಹಿಂದೂ ಸಾಮಾ ಜಿಕ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ, ಹಿಂದೂ ಚಳವಳಿಯನ್ನು ಹತ್ತಿಕ್ಕಲು ಜಿಲ್ಲಾ ಆಡಳಿತ ಮುಂದಾಗಿದೆ’ ಎಂದು ದೂರಿದ್ದಾರೆ. ‘ಮುಸ್ಲಿಂಮರ ಮತದಿಂದಲೇ ನನ್ನ ಗೆಲುವು’ ಎಂಬ ಕಾಂಗ್ರೆಸ್ ಸರ್ಕಾರದ ಕೋಮುವಾದಿ ಹೇಳಿಕೆ ಸೆಕ್ಯುಲರ್ ಮುಖವಾಡವನ್ನು ಕಳಚಿಹಾಕಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.