ADVERTISEMENT

ಬಾದಾಮಿ: ಶಿಲಾವಶೇಷ ಪತ್ತೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 9:05 IST
Last Updated 29 ಜನವರಿ 2018, 9:05 IST
ಬಾದಾಮಿ ಮ್ಯೂಸಿಯಂ ಸಮೀಪದ ಒಳಚರಂಡಿ ಕಾಮಗಾರಿಗೆ ಭೂಮಿಯನ್ನು ಅಗೆದಾಗ ದೊರಕಿದ ಶಿಲಾವಶೇಷಗಳನ್ನು ಡಾ.ಎಸ್‌.ಐ. ಪತ್ತಾರ ವೀಕ್ಷಿಸಿದರು
ಬಾದಾಮಿ ಮ್ಯೂಸಿಯಂ ಸಮೀಪದ ಒಳಚರಂಡಿ ಕಾಮಗಾರಿಗೆ ಭೂಮಿಯನ್ನು ಅಗೆದಾಗ ದೊರಕಿದ ಶಿಲಾವಶೇಷಗಳನ್ನು ಡಾ.ಎಸ್‌.ಐ. ಪತ್ತಾರ ವೀಕ್ಷಿಸಿದರು   

ಬಾದಾಮಿ: ಇಲ್ಲಿನ ಮ್ಯೂಸಿಯಂ ಬಳಿ ಒಳಚರಂಡಿ ಕಾಮಗಾರಿಗೆ ತೆಗೆದ ಭೂ ಅಗೆತದಲ್ಲಿ ಲಭ್ಯವಾದ ಶಿಲಾವಶೇಷಗಳು ಚಾಲುಕ್ಯ, ಕಲ್ಯಾಣಿ ಚಾಲುಕ್ಯ ಮತ್ತು ವಿಜಯನಗರ ಸಾಮ್ರಾಜ್ಯ ಕಾಲದ ಅವಶೇಷಗಳು ಎಂದು ಇತಿಹಾಸ ಸಂಶೋಧಕ ಡಾ. ಎಸ್‌.ಐ.ಪತ್ತಾರ ಹೇಳಿದರು. ‘ಪ್ರಜಾವಾಣಿ’ಯಲ್ಲಿ ಭಾನುವಾರ ಶಿಲಾವಶೇಷಗಳ ಪತ್ತೆ ಕುರಿತು ಸುದ್ದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅವರು ಪರಿಶೀಲಿಸಿದರು.

ಮ್ಯೂಸಿಯಂ ರಸ್ತೆಯಲ್ಲಿ 10 ಅಡಿ ಆಳದ ಕೆಳಗೆ ಕೆಲವು ಮೆಟ್ಟಲುಗಳ ರೀತಿಯಲ್ಲಿ ಕಾಣುತ್ತಿದ್ದು, ಇದು ವಿಜಯನಗರ ಸಾಮ್ರಾಜ್ಯ ಕಾಲದ ಕೋಟೆ ಗೋಟೆಯ ತಳಪಾಯವಾಗಿದೆ. ಚಿಕ್ಕ ಕಂಬಗಳಲ್ಲಿ ಗಣಗಳ ಮೂರ್ತಿ ಮತ್ತು ಅರ್ಧ ಕಂಬ ಬೋದು ದೊರಕಿದೆ. ಇವುಗಳು ಚಾಲುಕ್ಯ ಮತ್ತು ಕಲ್ಯಾಣಿ ಚಾಲುಕ್ಯರ ಕಾಲದವು ಎಂದು ತಿಳಿಸಿದರು.

ಅಗಸ್ತ್ಯತೀರ್ಥ ಹೊಂಡದ ಸಮೀಪದ ತಟಕೋಟೆಗೆ ಹೋಗುವ ಮಾರ್ಗದಲ್ಲಿ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಕೋಟೆ ಗೋಡೆಯನ್ನು ನಿರ್ಮಿಸಿದ್ದಾರೆ. ಇಲ್ಲಿ ಇದಕ್ಕೆ ವೃತ್ತಾಕಾರದ ಬುರುಜು ಇದೆ. ಮೊದಲಿಗೆ ವೃತ್ತಾಕಾರದ ಬುರುಜು ಸಂಪೂರ್ಣವಾಗಿ ಹೊಂಡಕ್ಕೆ ಅಂಟಿಕೊಂಡಿತ್ತು. ಅರ್ಧ ಬುರುಜು ಕಾಲನ ದಾಳಿಗೆ ಸಿಕ್ಕು ಬಿದ್ದು ಹೋಗಿದೆ. ಈಗ ಭೂಮಿಯನ್ನು ಅಗೆದಾದ ಇಲ್ಲಿ ಬುರುಜಿನ ವೃತ್ತಾಕಾರದ ಅಡಿಪಾಯ ದೊರಕಿದೆ ಎಂದು ಹೇಳಿದರು.

ADVERTISEMENT

ಚಾಲುಕ್ಯರ ಕಾಲದಲ್ಲಿ ದುರ್ಗದ ಒಳಗೆ ಯಾರೂ ಬರುವಂತಿಲ್ಲ. ಅಗಸ್ತ್ಯತೀರ್ಥ ಹೊಂಡದಲ್ಲಿಯೇ ಈಜಿ ಬರಬೇಕಿತ್ತು. ವೈರಿಗಳನ್ನು ಕಾಯಲು ಅಗಸ್ತ್ಯತೀರ್ಥ ಹೊಂಡದಲ್ಲಿ ಬುರುಜಿನ ಪಕ್ಕದಲ್ಲಿ ಒಂದು ಗೌಪ್ಯವಾದ ಕಾವಲುಗಾರನ ಮನೆಯಾಕಾರವಿದೆ. ಇದಕ್ಕೆ ಎರಡೂ ಕಡೆ ಬಾಗಿಲು ಇದೆ. ಈಗಲೂ ಇದನ್ನು ವೀಕ್ಷಿಸಬಹುದು.

* *

ಇದುವರೆಗೂ ಚಾಲುಕ್ಯರ ಪರಿಸರದಲ್ಲಿ ಭೂ ಉತ್ಖನನ ಆಗಿಲ್ಲ. ಉತ್ತರ ದಿಕ್ಕಿನ ಭೂಮಿಯಲ್ಲಿ ಸಾಕಷ್ಟು ಅವಶೇಷಗಳು ದೊರೆಯಬಹುದು
ಡಾ. ಪತ್ತಾರ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.