ADVERTISEMENT

ಉಸಿರು ಇಲ್ಲದೇ ಮರಾಠಿಗರು ಬದುಕಲು ಸಾಧ್ಯವೇ? ಕನ್ನಡ ನಮ್ಮ ಉಸಿರು: ಡಾ.ಶೇಖರ ಮಾನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 11:11 IST
Last Updated 26 ನವೆಂಬರ್ 2020, 11:11 IST

ಬಾಗಲಕೋಟೆ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಡಿಸೆಂಬರ್ 5ರಂದು ಕನ್ನಡಪರ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಬೆಂಬಲ ನೀಡದಂತೆ ಸಾರ್ವಜನಿಕರಿಗೆ ಜಿಲ್ಲಾ ಮರಾಠ ಸಮಾಜದ ಅಧ್ಯಕ್ಷ ಡಾ.ಶೇಖರ ಮಾನೆ ಮನವಿ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠಿ ನಮ್ಮ ಮಾತೃಭಾಷೆ. ಕನ್ನಡ ಉಸಿರಿನ ಭಾಷೆ. ಉಸಿರು ಇಲ್ಲದೇ ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿದರು.

ನಾವು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದು ಕನ್ನಡಿಗರೇ ಆಗಿ ಹೋಗಿದ್ದೇವೆ. ಸರ್ಕಾರ ನಿಗಮ ಸ್ಥಾಪಿಸಿರುವುದು ಮರಾಠಿ ಭಾಷಿಕರ ಅನುಕೂಲಕ್ಜೆ ಅಲ್ಲ. ಬದಲಿಗೆ ಮರಾಠಿ ಸಮುದಾಯದವರ ಅಭ್ಯುದಯಕ್ಕೆ. ಹೀಗಾಗಿ ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದರು.

ADVERTISEMENT

ರಾಜ್ಯ ಸರ್ಕಾರ ಇದು ಎರಡನೇ ಬಾರಿಗೆ ಮರಾಠ ಸಮುದಾಯದವರ ಬೆನ್ನಿಗೆ ನಿಂತಿದೆ. ಈ ಮೊದಲು ಸದಾನಂದಗೌಡ ಮುಖ್ಯಮಂತ್ರಿ ಆಗಿದ್ದಾಗ ಛತ್ರಪತಿ ಶಿವಾಜಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆಗೆ ಆದೇಶಿಸಿದ್ದರು. ಈಗ ಯಡಿಯೂರಪ್ಪ ಅಭಿವೃದ್ಧಿ ನಿಗಮ ಆರಂಭಿಸಿದ್ದಾರೆ. ಅವರಿಗೆ ಅಭಾರಿಯಾಗಿದ್ದೇವೆ. ನಿಗಮಕ್ಕೆ ಪ್ರತಿ ವರ್ಷ ಅನುದಾನ ಮೊತ್ತ ಹೆಚ್ಚಿಸುತ್ತಾ ಹೋಗಲಿ ಎಂದು ಮನವಿ ಮಾಡಿದರು.

ವಿಧಾನಪರಿಷತ್ ಮಾಜಿ ಸದಸ್ಯ ನಾರಾಯಣ ಸಾ ಭಾಂಡಗೆ ಮಾತನಾಡಿ, ಕರ್ನಾಟಕ ನಮ್ಮದು. ನಾವು ಇಲ್ಲಿಯವರೇ. ಬೆಳಗಾವಿಯ ಕನ್ನಡಿಗರು ಎಂಇಎಸ್ ಸಂಘಟನೆಯನ್ನು ಎಷ್ಟು ವಿರೋಧಿಸುತ್ತಿದ್ದಾರೆಯೋ ನಾವು ಅಷ್ಟೇ ವಿರೋಧ ಮಾಡುತ್ತೇವೆ. ಬೆಳಗಾವಿ, ನಿಪ್ಪಾಣಿ ಎಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ ಎಂದರು.

ಕೆಲವು ಬಾಡಿಗೆ ಹೋರಾಟಗಾರರು ಕನ್ನಡದ ಹೆಸರಿನಲ್ಲಿ ಸಮಾಜದಲ್ಲಿನ ಸಾಮರಸ್ಯ ಕೆಡಿಸಲು ಮುಂದಾಗಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ವಾಟಾಳ್ ನಾಗರಾಜ ಪ್ರತಿಭಟನೆ ಮಾಡಿದರೆ 100 ಜನ ಸೇರುವುದಿಲ್ಲ. ಅದಕ್ಕಾಗಿಯೇ ಕತ್ತೆ ಮೇಲೆ, ಎಮ್ಮೆ ಮೇಲೆ ಕುಳಿತು ಗಿಮಿಕ್ ಮಾಡುವ ಅವರ ಪ್ರತಿಭಟನೆ ಕೇವಲ ಮಾಧ್ಯಮದವರ ಫೋಟೊಗೆ ಸೀಮಿತಗೊಂಡಿದೆ ಎಂದು ವ್ಯಂಗ್ಯವಾಡಿದರು.

ಕನ್ನಡಿಗರ, ಕನ್ನಡದ ವಿರೋಧಿ ಟಿಪ್ಪು ಸುಲ್ತಾನ್ ಸಮರ್ಥಿಸಿಕೊಳ್ಳುವ
ವಾಟಾಳ್ ನಾಗರಾಜ, ನೀಡಿರುವ ಬಂದ್ ಕರೆಗೆ ವ್ಯಾಪಾರಸ್ಥರು, ಸಂಘಟನೆಗಳು ಹಾಗೂ ಸಾರ್ವಜನಿಕರು ಬೆಂಬಲ ನೀಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿರಿಯ ವೈದ್ಯ ಡಾ.ಎಫ್.ಎಚ್.ಯೋಗಪ್ಪನವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.