ಇಳಕಲ್: ನಗರದ ಅಂಬೇಡ್ಕರ್ ಕಾಲೊನಿಯ ಅಂಬೇಡ್ಕರ್ ಭವನದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ದಲಿತ ಹಿತ ರಕ್ಷಣಾ ಸಮಿತಿಯ 'ರಾಜಗೃಹ ಗ್ರಂಥಾಲಯ' ಉದ್ಘಾಟನೆ ಹಾಗೂ 'ಭೀಮಗಾಥೆ' ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.
ನೂತನ ಗ್ರಂಥಾಲಯ ಉದ್ಘಾಟಿಸಿದ ಚಿಂತಕ ಪರಶುರಾಮ ಮಹರಾಜನವರ ಮಾತನಾಡಿ, ನಮ್ಮೆಲ್ಲರ ಏಳ್ಗೆಗಾಗಿ ಬಾಬಾಸಾಹೇಬರು ಸ್ಪಷ್ಟ ಕಾರ್ಯಸೂಚಿ ನೀಡಿದ್ದಾರೆ. ಅದರಲ್ಲಿ ಅತಿ ಮುಖ್ಯವಾದುದು ಓದುವುದು. ಬಾಬಾಸಾಹೇಬರು ಓದುವ ಹವ್ಯಾಸ ಹೊಂದಿದ್ದರು, ಅದರಿಂದ ಅಪಾರ ಜ್ಞಾನ ಗಳಿಸಿದ್ದರು. ಯುಗಪುರುಷರಾಗಿ, ಕೋಟ್ಯಂತರ ಜನರ ವಿಮೋಚಕರಾಗಿ, ಸಂವಿಧಾನ ಶಿಲ್ಪಿಯಾಗಿ ಅವರು ಬೆಳಗಿದರು. ಬಾಬಾಸಾಹೇಬರ ಆಶಯದಂತೆ ಇಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಲಾಗಿದ್ದು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರು ಓದಿ, ಅರಿವು ಹೆಚ್ಚಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನ ನಿವೃತ್ತ ವ್ಯವಸ್ಥಾಪಕ ಶರಣಪ್ಪ ಆಮದಿಹಾಳ ಅವರು 'ಭೀಮಗಾಥೆ' ಪುಸ್ತಕ ಬಿಡುಗಡೆ ಮಾಡಿದರು. ಬಾಬಾಸಾಹೇಬರು ಸೇರಿದಂತೆ ಹಲವು ಸಮಾಜ ಸುಧಾರಕರ ಚಿಂತನೆಗಳು ಜೀವನಕ್ಕೆ ಹೊಸ ಬೆಳಕು ತರಬಲ್ಲವು. ಹೊಸ ಗ್ರಂಥಾಲಯದಲ್ಲಿ ಅತ್ಯಂತ ಮೌಲಿಕ ಪುಸ್ತಕಗಳಿದ್ದು, ಓದಿ ಜಾಗೃತರಾಗಬೇಕು. ಓದು ಮಾತ್ರ ನಮ್ಮನ್ನು ಉನ್ನತಿಯತ್ತ ಕರೆದೊಯ್ಯುತ್ತದೆ ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಯುವಕರು ಪುಸ್ತಕಗಳನ್ನು ಓದಿ ವೈಚಾರಿಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ನಗರಸಭೆ ಸದಸ್ಯ ಸುರೇಶ ಜಂಗ್ಲಿ, ಯಮನೂರ ಚಲವಾದಿ, ಮಾದರ, ಆನಂದ ಚಲವಾದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.